ಕೆರೂರ: ಹಿಂದುಳಿದ, ದುರ್ಬಲ ವರ್ಗದ ವೃದ್ಧರು, ವಿಧವೆ, ಅಂಗವಿಕಲರ ಅರ್ಥಿಕ ಬದುಕಿನ ಆಸರೆಗಾಗಿ ಸರ್ಕಾರ ಪಿಂಚಣಿ ಸೌಲಭ್ಯ ಜಾರಿಗೆ ತಂದಿದ್ದು, ಅಧಿಕಾರಿ ವರ್ಗ ಈ ಯೋಜನೆಯನ್ನು ವಿಳಂಬ ಮಾಡದೆ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಮುಂದಾಗಬೇಕು ಎಂದು ಉಪವಿಭಾಗಾಧಿಕಾರಿ ಮಹಾದೇವ ಮುರಗಿ ಹೇಳಿದರು.
ಪಟ್ಟಣದ ವಿದ್ಯಾವರ್ಧಕ ಸಂಘದ ಎಂ.ಎಚ್. ಮೆಣಸಗಿ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಪಿಂಚಣಿ ಅದಾ ಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಧಿಕಾರಿಗಳು ಪಿಂಚಣಿಗಾಗಿ ತಮ್ಮ ಬಳಿಗೆ ಬಂದ ಅರ್ಜಿಗಳನ್ನು ಶೀಘ್ರವೇ ಪರಿಶೀಲಿಸುವ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಸರಕಾರದ ಸೌಲಭ್ಯವನ್ನು ಸಾಧ್ಯವಾದಷ್ಟು ಬೇಗನೆ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಸೂಚಿಸಿದರು.
ಬಾದಾಮಿಯ ಗ್ರೇಡ್ 2 ತಹಶೀಲ್ದಾರ್ ಆರ್.ಎಸ್. ರೇವಡಿಗಾರ ಪ್ರಾಸ್ತಾವಿಕವಾಗಿ ಮಾತನಾಡಿ ಪಿಂಚಣಿಗಾಗಿ ಇರುವ ಅರ್ಹತೆ ಹಾಗೂ ಮಾನದಂಡಗಳನ್ನು ವಿವರಿಸಿದರು. ಅರ್ಹ ವ್ಯಕ್ತಿಗಳು ಪಿಂಚಣಿ ಸೌಲಭ್ಯಕ್ಕೆ ಅರ್ಜಿ, ದಾಖಲೆ ಪತ್ರ ಸಲ್ಲಿಸಿ ಪ್ರಯೋಜನ ಪಡೆಯಬೇಕು ಎಂದರು.
ತಹಶೀಲ್ದಾರ್ ಅಜೀಜ ದೇಸಾಯಿ ಪಿಂಚಣಿ ಪಡೆದ ಅನೇಕ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು. ಉಪ ತಹಶೀಲ್ದಾರ್ ಶಿವಾನಂದ ಬೊಮ್ಮನ್ನವರ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ವಿ.ವೈ. ಬಡಿಗೇರ, ಗ್ರಾಮ ಲೆಕ್ಕಾಧಿಕಾರಿ ವಿಜಯಕುಮಾರ ಗುಮಶೆಟ್ಟಿ, ಪಿ.ಬಿ. ಶೆಲ್ಲಿಕೇರಿ ಹಾಗೂ ಕಾಲೇಜಿನ ಉಪನ್ಯಾಸಕ ಸಿ.ಎಚ್. ಗೌಡರ, ಕೆ. ಎನ್. ನೀಲಪ್ಪನವರ ಉಪಸ್ಥಿತರಿದ್ದರು.