ಚಾಮರಾಜನಗರ: `ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಎಲ್ಲ ವರ್ಗದ ಅರ್ಹರಿಗೆ ತಲುಪಿಸುವ ಜವಾಬ್ದಾರಿಯನ್ನು ಸಂಘ-ಸಂಸ್ಥೆಯ ಪದಾಧಿಕಾರಿಗಳು ನಿರ್ವಹಿಸಬೇಕು' ಎಂದು ಚೂಡಾ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಹೇಳಿದರು.ತಾಲ್ಲೂಕಿನ ಅಮಚವಾಡಿ ಗ್ರಾಮದ ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ಸೋಮವಾರ ನಡೆದ ಶ್ರೀರಾಮುಲು ಅಭಿಮಾನಿಗಳ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶ್ರೀರಾಮುಲು ಸಚಿವರಾಗಿದ್ದ ವೇಳೆ ಆರೋಗ್ಯ ಕವಚ-108 ಯೋಜನೆ ಯನ್ನು ಜಾರಿಗೊಳಿಸಿದರು. ಆ ಮೂಲಕ ಬಡವರಿಗೆ ಉಚಿತ ಆರೋಗ್ಯ ಸೇವೆ ದಕ್ಕುವಂತೆ ಮಾಡಿದ್ದಾರೆ. ಶೋಷಿ ತರ ಪರ ಕಾಳಜಿಯಿ ಟ್ಟುಕೊಂಡಿರುವ ಶ್ರೀರಾಮುಲು ಹೆಸರಿನಲ್ಲಿ ಸಂಘ ಸ್ಥಾಪನೆಯಾಗಿರುವುದು ಸಂತಸ ತಂದಿದೆ ಎಂದರು.
ಶ್ರೀರಾಮುಲು ಸಚಿವರಾಗಿದ್ದ ವೇಳೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ವಾಲ್ಮೀಕಿ ಜಯಂತಿಯಂದು ಸಾರ್ವತ್ರಿಕ ರಜೆ ಘೋಷಿಸುವಂತೆ ಮಾಡುವಲ್ಲಿ ಶ್ರಮಿಸಿದರು. ನಾಯಕ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಕೆಲ್ಲಂಬಳ್ಳಿ ಸೋಮನಾಯಕ ಮಾತನಾಡಿ, ಶ್ರೀರಾಮುಲು ಜನಪರ ಕಾರ್ಯಕ್ರಮ ರೂಪಿಸಿ ಮತ್ತಷ್ಟು ಎತ್ತರಕ್ಕೆ ಬೆಳೆದು ಬಿಡುತ್ತಾರೆ ಎಂದು ರಾಜ್ಯ ಸರ್ಕಾರದ ಕೆಲವು ಸಚಿವರು ಅಸೂಯೆಪಟ್ಟರು. ಷಡ್ಯಂತ್ರ ಹೂಡಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೂಡ ತಪ್ಪಿಸಿದರು ಎಂದು ಟೀಕಿಸಿದರು. ಬಿಎಸ್ಆರ್ ಪಕ್ಷದ ಮುಖಂಡ ಲಿಂಗರಾಜನಾಯಕ ಅಧ್ಯಕ್ಷತೆ ವಹಿಸಿದ್ದರು.
ಶ್ರೀರಾಮುಲು ಅಭಿಮಾನಿಗಳ ಸಂಘದ ಅಧ್ಯಕ್ಷ ಮಹದೇವನಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟಾಚಲ, ಮುಖಂಡರಾದ ಮಾದನಾಯಕ, ಶೇಷನಾಯಕ, ನಾಗೇಶ್, ಶ್ರೀಕಾಂತು, ನಾರಾಯಣ ಸ್ವಾಮಿ, ವೀರಭದ್ರನಾಯಕ, ಅಮೀರ್ ಸಾಹೇಬ್, ಕತ್ತಿನಾಯಕ, ಶಿವಮಲ್ಲು ಹಾಜರಿದ್ದರು.