ಗೌರಿಬಿದನೂರು: ಅಲಕಾಪುರ ಚನ್ನಸೋಮೇಶ್ವರ ರಥೋತ್ಸವ ಸೋಮವಾರ ಅದ್ಧೂರಿಯಿಂದ ನೆರವೇರಿತು.
ವಿಶೇಷವಾಗಿ ಅಲಂಕರಿಸಲಾಗಿದ್ದ ರಥದಲ್ಲಿ ಚನ್ನಸೋಮೇಶ್ವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಜಿಲ್ಲೆಯ ವಿವಿಧ ತಾಲ್ಲೂಕು ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಬಾಳೆಹಣ್ಣು ಮತ್ತು ದವನ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಪ್ರಾಕಾರೋತ್ಸವ, ಗಂಧೋತ್ಸವ, ದೂಳೋತ್ಸವ ಮುಂತಾದ ಸೇವೆ ಅರ್ಪಿಸಲಾಯಿತು. ದೇವಾಲಯದ ನಿತ್ಯ ಅನ್ನದಾಸೋಹ ಸಮಿತಿ, ಶ್ರೀರಾಮ ಸೇವಾ ಸಮಿತಿ ಮತ್ತು ವೀರಶೈವ ದಾಸೋಹ ಸಮಿತಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಜನರು ಬತ್ತಾಸು, ಖಾರ, ಸಿಹಿ ಪದಾರ್ಥಗಳು ಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಮಹಿಳೆಯರು ಬಳೆ, ಗೃಹೋಪಯೋಗಿ ವಸ್ತು ಮತ್ತು ಮಕ್ಕಳು ಆಟಿಕೆ ಖರೀದಿಯಲ್ಲಿ ಮಗ್ನರಾಗಿದ್ದರು.
ತಹಶೀಲ್ದಾರ್ ಡಾ.ಬಿ.ಸುಧಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಕಂದಾಯ ಇಲಾಖೆ ಅಧಿಕಾರಿ ಗಂಗಾಧರಪ್ಪ, ಗ್ರಾಮ ಲೆಕ್ಕಾಧಿಕಾರಿ ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಮ್ಮ, ಸದಸ್ಯರಾದ ಪ್ರಭಾಕರ್, ಗಂಗಾಧರಪ್ಪ, ಚಲಪತಿ ಮುಂತಾದವರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.