ಶ್ರೀನಿವಾಸಪುರ: ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಅಲೆಮಾರಿ ಜನಾಂಗವನ್ನು ಸಮಾಜದ ಮುಖ್ಯ ವಾಹಿನಿ ತರಲು ಮೀಸಲಿರುವ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ಮಾಡಿದರು.
ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಮಾನಸ ಅಲೆಮಾರಿ ಮತ್ತು ಅರೆ ಅಲೆಮಾರಿ ಸೇವಾ ಟ್ರಸ್ಟ್ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಅಲೆಮಾರಿ ಜನಾಂಗದ ಸೌಲಭ್ಯಗಳ ಅರಿವು ಹಾಗೂ ಪರಿಸರ ಸಂರಕ್ಷಣೆ ಕುರಿತಾದ ಪ್ರಚಾರಾಂದೋಲನದಲ್ಲಿ ಮಾತನಾಡಿ, ಕೆರೆಗಳ ಒತ್ತುವರಿ ಮತ್ತು ಮರ ಗಿಡ ಕಡಿಯುವ ಕಾರ್ಯಕ್ಕೆ ಪೂರ್ಣ ವಿರಾಮ ಹಾಕಬೇಕು ಎಂದರು.
ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಮನುಷ್ಯನ ಸ್ವಾರ್ಥಕ್ಕೆ ಪ್ರಕೃತಿ ಬಲಿಯಾಗುತ್ತಿದೆ. ನಿಸರ್ಗದತ್ತವಾದ ಗಿಡ, ಮರ, ಪ್ರಾಣಿ, ಪಕ್ಷಿ ಮಾಯವಾಗುತ್ತಿವೆ. ಪ್ರಕೃತಿಯನ್ನು ಆರಾಧಿಸದ ಹೊರತು ಮನುಷ್ಯನಿಗೆ ನೆಮ್ಮದಿ ಸಿಗುವುದಿಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಿ.ಬೈರೇಗೌಡ ತಾಂತ್ರಿಕ ಮಹಾ ವಿದ್ಯಾಲಯದ ಕಾರ್ಯದರ್ಶಿ ವಿ.ಕೃಷ್ಣಾರೆಡ್ಡಿ, ಡಾ. ಮಂಜುಳಾ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರತ್ಮಮ್ಮ ಗಣೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೈದ್ಯಂ ವೆಂಕಟರೆಡ್ಡಿ, ಮಾಜಿ ಅಧ್ಯಕ್ಷ ಬಿ.ಎಂ.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಗಣೇಶ್, ನಾರೆಮ್ಮ, ಎನ್.ಅಪ್ಪಾಲಪ್ಪ, ಎಂಪಿಸಿಎಸ್ ಅಧ್ಯಕ್ಷ ಅಪ್ಪಿರೆಡ್ಡಿ, ಟ್ರಸ್ಟ್ ಕಾರ್ಯದರ್ಶಿ ಎಲ್.ಶಿವಣ್ಣ, ಸಮಾಜ ಸೇವಕಿ ಇಂದ್ರಾಣಿ, ಸಮಾಜ ಸೇವಕ ಕೊತ್ತೂರು ಮಂಜುನಾಥ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಮುನಿವೆಂಕಟಪ್ಪ ಹಾಜರಿದ್ದರು.ವರ್ತನಹಳ್ಳಿ ವೆಂಕಟೇಶ್ ಸ್ವಾಗತಿಸಿದರು. ನರಸಿಂಹಪ್ಪ ವಂದಿಸಿದರು.