ನವದೆಹಲಿ (ಪಿಟಿಐ): ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಶೇಕಡಾ 27 ಕೋಟಾದ ಒಳಗಡೆಯೇ ಅಲ್ಪಸಂಖ್ಯಾತರಿಗೆ ಶೇಕಡಾ 4.5 ಕೋಟಾ ಒದಗಿಸಿದ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ರದ್ದು ಪಡಿಸಿ ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ ಆಜ್ಞೆಯನ್ನು ತಡೆ ಹಿಡಿಯಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿತು.
ಈ ವಿಚಾರದ ಬಗ್ಗೆ ಬುಧವಾರ ವಿಚಾರಣೆಗೆ ದಿನ ನಿಗದಿ ಪಡಿಸಿದ ಸುಪ್ರೀಂಕೋರ್ಟ್ ಅಲ್ಪಸಂಖ್ಯಾತರಿಗೆ ಶೇಕಡಾ 4.5ರಷ್ಟು ಕೋಟಾ ಒದಗಿಸುವ ಸಂಬಂಧ ಪೂರಕ ದಾಖಲೆಗಳನ್ನು ಹಾಜರು ಪಡಿಸುವಂತೆ ಕೇಂದ್ರಕ್ಕೆ ಸೂಚಿಸಿತು.
ಅಲ್ಪಸಂಖ್ಯಾತರಿಗೆ ಕೋಟಾ ನೀಡುವುದಕ್ಕೆ ಸಂಬಂಧಿಸಿದ ನೀತಿಯನ್ನು ಸಮರ್ಥಿಸುವಂತಹ ಯಾವುದೇ ದಾಖಲೆಯನ್ನು ಹಾಜರು ಪಡಿಸದೇ ಇದ್ದುದಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನವನ್ನೂ ವ್ಯಕ್ತ ಪಡಿಸಿತು.
ಇಂತಹ ~ಸೂಕ್ಷ್ಮ ವಿಚಾರ~ವನ್ನು ನಿಭಾಯಿಸಿದ ರೀತಿಗಾಗಿಯೂ ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಇತರ ಹಿಂದುಳಿದ ವರ್ಗಗಳ ಶೇಕಡಾ 27 ಕೋಟಾವನ್ನು ಹೇಗೆ ಒಡೆಯುತ್ತೀರಿ? ಇಂದು ಒಂದು ವಿಚಾರಕ್ಕಾಗಿ ಒಡೆದರೆ, ನಾಳೆ ಇನ್ನೊಂದು ವಿಚಾರಕ್ಕಾಗಿ ಒಡೆಯಬಹುದಲ್ಲ? ಎಂದು ನ್ಯಾಯಾಲಯ ಪ್ರಶ್ನಿಸಿತು.