ಚಿತ್ರದುರ್ಗ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ನಗರ ಅಲ್ಪಸಂಖ್ಯಾತರ ಘಟಕ ಆರೋಪಿಸಿದೆ.
ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿ ಶತಮಾನಗಳು ಕಳೆದರೂ ಮುಸ್ಲಿಂರಿಗೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ದೊರೆತಿಲ್ಲ. ಅದೇ ರೀತಿ ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯ್ತಿ ತಾಲ್ಲೂಕು ಪಂಚಾಯ್ತಿ ಚುನಾವಣೆಗಳ ಟಿಕೆಟ್ ನೀಡುವಲ್ಲಿ ಸಮುದಾಯವನ್ನು ವಂಚಿಸಲಾಗುತ್ತಿದೆ. ಈಗ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಇದ್ದರೂ ಮುಸ್ಲಿಂ ಜನಾಂಗಕ್ಕೆ ದ್ರೋಹ ಎಸಗಲಾಗಿದೆ.
ಕಾಂಗ್ರೆಸ್ ಮುಸ್ಲಿಂ ಜನಾಂಗವನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲು ಮಾತ್ರ ಸೀಮಿತವಾಗಿದೆ.
ಜಿಲ್ಲೆಯಲ್ಲಿ ಶೇ. 35ರಷ್ಟು ಮುಸ್ಲಿಂ ಜನಾಂಗವನ್ನು ಹೊಂದಿದ್ದರೂ ಇದುವರೆಗೂ ಸೂಕ್ತ ಸ್ಥಾನಮಾನ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ನಗರ ಅಲ್ಪಸಂಖ್ಯಾತರ ಅಧ್ಯಕ್ಷ ಎಂ. ಹನೀಫ್, ಸೈಯದ್ ಅಬ್ದುಲ್ ರೆಹಮಾನ್, ಜಬೀವುಲ್ಲಾ, ಸೈಯದ್ ಸಾದಿಕ್ ಮತ್ತಿತರರು ಪ್ರಕಟಣೆಯಲ್ಲಿ ದೂರಿದಾರೆ.
ನಾಳೆ ಸಭೆ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಮುಸ್ಲಿಂರಿಗೆ ಆಗಿರುವ ಮೋಸದ ಬಗ್ಗೆ ಚರ್ಚಿಸಿ, ಮುಂದಿನ ನಿಲುವುಗಳನ್ನು ಕೈಗೊಳ್ಳಲು ಜೂನ್ 22ರಂದು ಸಂಜೆ 4ಕ್ಕೆ ನಗರದ ಬಡಾಮಕಾನ್ನಲ್ಲಿ ಸಭೆ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.