ಬೆಂಗಳೂರು (ಪಿಟಿಐ): ರಂಗನಾಥ ಮಿಶ್ರಾ ಹಾಗೂ ಸಾಚಾರ್ ವರದಿಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸೋಮವಾರ ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ಧಾರ್ಮಿಕ ಅಲ್ಪಸಂಖ್ಯಾತ ಮಕ್ಕಳು ಶಾಲೆಗಳಿಗೆ ಸೇರುವುದಕ್ಕೆ, ಉನ್ನತ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವ್ಯಾಪ್ತಿಗೆ ತರುವುದು ಇದರಿಂದ ಸುಲಭವಾಗಲಿದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.
5875ನ ಹಳ್ಳಿಗಳಲ್ಲಿನ ನೀರಿನಲ್ಲಿ ಫ್ಲೋರೈಡ್, ಆರ್ಸೆನಿಕ್, ನೈಟ್ರೇಟ್ ಹಾಗೂ ಇನ್ನಿತರ ರಾಸಾಯನಿಕ ಅಂಶಗಳು ಅಧಿಕವಾಗಿವೆ ಎಂದು ಹೇಳಿದ ಅವರು ಪರಿಶುದ್ಧ ಕುಡಿಯುವ ನೀರನ್ನು ಪ್ರತಿ ಹಳ್ಳಿಗೂ ನೀಡಲು ಸರ್ಕಾರ ಬದ್ದವಾಗಿದ ಎಂದು ಹೇಳಿದರು.
ಈಗಾಗಲೇ ಗದಗದಲ್ಲಿರುವ ಪರಿಶುದ್ಧ ಕುಡಿಯುವ ನೀರು ಘಟಕವು ಕೆಲವು ಹಳ್ಳಿಗಳಿಗೆ ಶುದ್ಧ ನೀರನ್ನು ಪೂರೈಸುತ್ತಿದೆ. ಇದೇ ಮಾದರಿಯ ಸಾವಿರ ಘಟಕಗಳನ್ನು ಮುಂದಿನ ವರ್ಷ ಜನವರಿ ಹೊತ್ತಿಗೆ ಸ್ಥಾಪಿಸಲಾಗುವುದು ಎಂದು ರಾಜ್ಯಪಾಲರು ಹೇಳಿದರು.
ಕೃಷಿ ಬೆಲೆ ಸಮಿತಿಯನ್ನು ರಚಿಸುವ ಮೂಲಕ ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.