ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಲ್ಲಿ ಚುನಾವಣಾ ಪ್ರಚಾರ

Last Updated 22 ಏಪ್ರಿಲ್ 2013, 5:54 IST
ಅಕ್ಷರ ಗಾತ್ರ

ಜನರು ಆಶೀರ್ವದಿಸುವ ವಿಶ್ವಾಸ: ಸೋಮನಗೌಡ
ಬಸವನಬಾಗೇವಾಡಿ:
`ನನ್ನ ತಂದೆಯವರಾದ ದಿ. ಬಿ.ಎಸ್. ಪಾಟೀಲ (ಮನಗೂಳಿ) ಅವರು 6 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅವರು ಎಂದು ಅಧಿಕಾರದ ದರ್ಪವನ್ನು ತೋರಿಸಲಿಲ್ಲ, ಅವರ ಆದರ್ಶ ತತ್ವಗಳನ್ನು ಬೆಳೆಸಿಕೊಂಡಿರುವ ನನಗೆ ಕ್ಷೇತ್ರದ ಜನತೆ ಮತ ನೀಡುವುದರ ಮೂಲಕ ಆಯ್ಕೆ ಮಾಡುತ್ತಾರೆ' ಎಂದು ಬಸವನಬಾಗೇವಾಡಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೋಮನಗೌಡ ಪಾಟೀಲ (ಮನಗೂಳಿ) ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಶುಕ್ರವಾರ ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಶರಣು ಮಸಬಿನಾಳ, ಸಜು ಬ್ಯಾಕೋಡ, ಇಮ್ತಿಯಾಜ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಸಂಗರಾಜ ದೇಸಾಯಿ ಪ್ರಚಾರ
ಆಲಮಟ್ಟಿ:
`ಈ ಬಾರಿ ನನ್ನನ್ನು ಆಯ್ಕೆ ಮಾಡಿದರೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ಮನೆ ಮನೆಗೆ ಶಾಸಕ, ಮನೆ ಮನೆಗೆ ಸೇವಕನಾಗಿ ಕಾರ್ಯನಿರ್ವಹಿಸುತ್ತೇನೆ' ಎಂದು ಬಸವನಬಾಗೇವಾಡಿ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ಸಂಗರಾಜ ದೇಸಾಯಿ ಹೇಳಿದರು.

ನಿಡಗುಂದಿಯ ನೇಕಾರ ಕಾಲೊನಿಯಲ್ಲಿ ಮತಯಾಚಿಸಿ ಅವರು ಮಾತನಾಡಿದರು. ನಾನು ಯಾವುದೇ ಹಣ ಗಳಿಸುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ, ಆರ್ಥಿಕವಾಗಿಯೂ, ಶೈಕ್ಷಣಿಕವಾಗಿಯೂ ಸಬಲವಾಗಿದ್ದೇನೆ, ಜನತೆಯ ಸೇವಕನಾಗಿ ಕಾರ್ಯನಿರ್ವಹಿಸುವುದೇ ನನ್ನ ಗುರಿ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ಭಾಗದ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಿ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿದ್ದಾರೆಂದರು.

ಬಸವನಬಾಗೇವಾಡಿ ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಮಾತನಾಡಿ, ನಯ, ವಿನಯ ಸ್ವಭಾವದ ಸಂಗರಾಜ ಅವರಿಗೆ ಮತ ಹಾಕಿ ಎಂದು ದೇಸಾಯಿ ಹೇಳಿದರು. ಟಿ.ಟಿ. ಹಗೇದಾಳ, ಸಂಗಪ್ಪ ಗೌಡರ, ಮುತ್ತು ನೇಬಗಿರಿ, ಅಂದಾನೆಪ್ಪ ಕೂಚಬಾಳ ಮೊದಲಾದವರಿದ್ದರು.

ಮಂಗಳಾದೇವಿ ಬಿರಾದಾರ ಕಾಂಗ್ರೆಸ್‌ಗೆ ಸೇರ್ಪಡೆ
ಮುದ್ದೇಬಿಹಾಳ:
ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಂದು ಗುರುತಿಸಲ್ಪಟ್ಟಿದ್ದ  ಮಂಗಳಾದೇವಿ ಬಿರಾದರ ಅವರು ತಮಗೆ ಟಿಕೆಟ್ ಲಭಿಸದೇ ಇದ್ದುದಕ್ಕೆ ಅಸಮಾಧಾನಗೊಂಡು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.

ನಂತರ ಮಾತನಾಡಿದ ಅವರು, ರಾಜಕೀಯ ವಿದ್ಯಮಾನವನ್ನು ನೋಡಿ ಬೇಸರವಾಗಿ ನನ್ನ ಬೆಂಬಲಿಗರ ಅಭಿಪ್ರಾಯ ಪಡೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು  ಸೇರ್ಪಡೆಯಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಮಾತನಾಡಿ, ಮಂಗಳಾದೇವಿ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದು  ಪಕ್ಷಕ್ಕೆ ದೊಡ್ಡ ಬಲ ಬಂದಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಜಯ ಖಂಡಿತ. ಪಕ್ಷಕ್ಕೆ ಸೇರ್ಪಡೆಯಾದವರಿಗೆ ರಾಜಕೀಯ ಭವಿಷ್ಯದಲ್ಲಿ ವಿಶೇಷ ಕಾಳಜಿ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ 130ಕ್ಕೂ ಹೆಚ್ಚು ಸ್ಥಾನಗಳು ಲಭಿಸಲಿದ್ದು,   ಕೃಷ್ಣಾ ಬಿ-ಸ್ಕೀಮ್‌ನ 130 ಟಿಎಂಸಿ ಅಡಿ ನೀರಿನಲ್ಲಿ 80 ಟಿಎಂಸಿ ಅಡಿ ನೀರು ಹಂಚಿಕೆಯ ವಚನವನ್ನು ನೀಡಿದ್ದು ಸರ್ಕಾರದ ಮೊದಲ ಬಜೆಟ್‌ನಲ್ಲಿ 10ಸಾವಿರ ಕೋಟಿಗೂ  ಹೆಚ್ಚು ಹಣವನ್ನು ಮೀಸಲು ಇಟ್ಟು ದೇಶದಲ್ಲೇ ಜಿಲ್ಲೆಯನ್ನು ನೀರಾವರಿ ಪ್ರದೇಶವನ್ನಾಗಿಸುವಲ್ಲಿ ಪಕ್ಷ ಶ್ರಮಿಸುತ್ತದೆ ಎಂದು ಹೇಳಿದರು.

ಇದೇ ವೇಳೆ ಸ್ಥಳೀಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ನಗರದ ಉದ್ಯಮಿ ಬಾಬು ಜಾನ್ವೇಕರ್, ಬಸನಗೌಡ ಪಾಟೀಲ, ನಾಗೇಶ ನಾಯಕ, ಮಹಾವೀರ ಸುರಪುರ, ಪ್ರಹ್ಲಾದ ಹಜೇರಿ, ಶಶಿ ಛಾಯಾಗೋಳ, ವಕೀಲ ಎಸ್.ಎಚ್.ಲೊಟಗೇರಿ,  ರಾಜು ಕೊಂಗಿ, ಮಲ್ಲನಗೌಡ ಬಿರಾದಾರ, ಬಸವರಾಜ ಡಮನಾಳ, ಮಹಾಂತೇಶ ವಾಲಿ, ವೀರನಗೌಡ ಪಾಟೀಲ, ಕೆ.ಬಿ.ಬಿರಾದಾರ, ಎಸ್.ಎ.ಗಂಗಾವತಿ, ಬಿ.ಎಸ್.ಬಾಳಪ್ಪನವರ, ಖೂಬಾಸಿಂಗ್ ಚವ್ಹಾಣ, ಚಿಂತಾಮಣಿ ಮತ್ತು ಲಾಲೂ ಚವ್ಹಾಣ, ಜುಮ್ಮನಗೌಡ ಬಿರಾದಾರ ದಿಲೀಪ ಜಾನ್ವೇಕರ, ರಫೀಕ ಜಾನ್ವೇಕರ, ಜಾವೀದ ಜಾನ್ವೇಕರ, ಸಿಕಂದರ ಜಾನ್ವೇಕರ, ಕಾಶೀಮ ಬಾಗಲಕೋಟ, ಅಲ್ತಾಪ ಉಣ್ಣಿಭಾವಿ, ಮೈನುದ್ದೀನ ಉಣ್ಣಿಭಾವಿ, ಇಕ್ಬಾಲ ಮೂಲಿಮನಿ, ಮೈನೂದ್ದೀನ ಕೆಸರಟ್ಟಿ, ಸುರೇಶ ರಾಠೋಡ, ನಿಂಗಪ್ಪ ಉಪನಾಳ, ಎಂ.ಎ.ಮ್ಯೋಗೇರಿ, ಮಹಾಬಳೇಶ ಉಪನಾಳ, ರೇವಣೆಪ್ಪ ಚಲವಾದಿ ಮೊದಲಾದವರು ಕಾಂಗ್ರೆಸ್ ಸೇರಿದರು.

ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಮುಖಂಡ ಜಿ.ಎನ್. ಪಾಟೀಲ,  ಶೃಂಗಾರಗೌಡ ಪಾಟೀಲ, ಡಾ.ಎಂ.ಆರ್. ನಾಡಗೌಡ, ನೀಲಕಂಠರಾವ್ ದೇಶಮುಖ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ಗಫೂರ ಮಕಾನದಾರ, ಗುರು ತಾರನಾಳ,  ಕೆ.ಎಸ್.ಪಾಟೀಲ, ಬಸವರಾಜ ಸುಕಾಲಿ, ಎಂ.ಎ. ಮುದ್ದೇಬಿಹಾಳ, ಶರಣು ದೇಗಿನಾಳ, ಸಂಗಣ್ಣ ಬಿರಾದಾರ (ಜಿಟಿಸಿ), ಮಲ್ಲಿಕಾರ್ಜುನ ಸಿದರಡ್ಡಿ, ರಮೇಶ ಓಸ್ವಾಲ ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT