ಮಾನ್ವಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಅದರ ಮುಖಂಡರ ಬಗ್ಗೆ ತಾವು ಅಗೌರವದಿಂದ ಹಾಗೂ ಅವಹೇಳನಕಾರಿಯಾಗಿ ಮಾತನಾಡಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದರು.
ಮುನಿರಾಬಾದಿನ ಮುಖ್ಯ ಎಂಜಿನಿಯರ್ ಮಲ್ಲಿಕಾರ್ಜುನ ಜತೆಗೆ ಮೊಬೈಲ್ ದೂರವಾಣಿ ಮೂಲಕ ತಾವು ಮಾತನಾಡುವಾಗ ರೈತ ಸಂಘ, ಪ್ರೊ.ಎಂ.ಡಿ. ನಂಜುಂಡಸ್ವಾಮಿ ಕುರಿತು ಅಗೌರವದಿಂದ ಮಾತನಾಡಿದ್ದಾಗಿ ಆರೋಪಿಸಿದ್ದಾರೆ. ಈ ಆರೋಪದ ಕುರಿತು ಮುಖ್ಯ ಎಂಜಿನಿಯರ್ ಮಲ್ಲಿಕಾರ್ಜುನ ನಿರಾಕರಿಸಿದ್ದಾರೆ. 1970ರಿಂದ ರೈತ ಹೋರಾಟದ ಮೂಲಕ ಬೆಳೆದು ಬಂದಿರುವ ನಾನು, ರೈತ ಸಂಘ ಹಾಗೂ ಮುಖಂಡರ ಬಗ್ಗೆ ಅಗೌರವದ ಹೇಳಿಕೆ ನೀಡಿಲ್ಲ ಎಂದರು.
ಅಧಿಕಾರ ಇರಲಿ, ಇಲ್ಲದಿರಲಿ ಸದಾ ರೈತರ ಪರವಾಗಿ ಕೆಲಸ ಮಾಡಿದ್ದೇನೆ. ರೈತರ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ, ಮಾತುಕತೆ ನಡೆಸುವುದು ಸಹಜ. ಹಾಗಂತ ರೈತ ವಿರೋಧಿ ಧೋರಣೆ ಎಂದಿಗೂ ಅನುಸರಿಸಿಲ್ಲ. ನನ್ನ ಹೇಳಿಕೆ ಕುರಿತು ನಂಬುವಂತಹ ಸಮರ್ಪಕ ಸಾಕ್ಷ್ಯಾಧಾರ ಒದಗಿಸಲಿ. ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸುವೆ. ಈ ಕುರಿತು ಸದಾ ಚರ್ಚೆಗೆ ಸಿದ್ಧ ಎಂದು ಬೋಸರಾಜು ಸವಾಲು ಹಾಕಿದರು. ರೈತ ಸಂಘದ ಕ್ಷಮೆ ಯಾಚಿಸುವ ಕುರಿತು ಕೇಳಿದ ಪ್ರಶ್ನೆಗೆ ಅವಹೇಳನಕಾರಿ ಹೇಳಿಕೆ ನೀಡಿಯೇ ಇಲ್ಲ. ಕ್ಷಮೆ ಕೇಳುವ ಅಗತ್ಯ ಇಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಂಡರು.
ಶಾಸಕ ಜಿ.ಹಂಪಯ್ಯ ನಾಯಕ, ಮಾನ್ವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ ಸಾಬ, ಸಿರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯ್ಯನಗೌಡ ಜಂಬಲದಿನ್ನಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸೈಯದ್ ಇಲಿಯಾಸ್ ಖಾದ್ರಿ, ಚುಕ್ಕಿ ಸೂಗಪ್ಪ ಸಿರವಾರ, ಶೇಷರೆಡ್ಡಿ ಕವಿತಾಳ ಉಪಸ್ಥಿತರಿದ್ದರು.