ಚನ್ನಪಟ್ಟಣ: ಇಲ್ಲಿನ ನಗರಸಭಾಧ್ಯಕ್ಷೆ ರೇಷ್ಮಾಭಾನು ಮತ್ತು ಉಪಾಧ್ಯಕ್ಷ ಕೆ.ಎಲ್. ಕುಮಾರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿಶೇಷ ಸಭೆ ಕರೆಯುವಂತೆ ಆಗ್ರಹಿಸಿ 23 ಮಂದಿ ನಗರಸಭಾ ಸದಸ್ಯರು ಸೋಮವಾರ ನಗರಸಭೆ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ನೀಡಿದ್ದಾರೆ.
ಅಧ್ಯಕ್ಷೆ ರೇಷ್ಮಾಭಾನು ಮತ್ತು ಉಪಾಧ್ಯಕ್ಷ ಕೆ.ಎಲ್. ಕುಮಾರ್ರವರು ನಗರಸಭಾ ಸದಸ್ಯರಿಗೆ ಮತ್ತು ಸಾರ್ವಜನಿಕರ ವಿಚಾರಗಳಿಗೆ ಸ್ಪಂದಿಸುತ್ತಿಲ್ಲ. ಜನಪತಿನಿಧಿಗಳಾದ ನಾವು ನಗರದ ನಾಗರಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿಲ್ಲ. ಆದ್ದರಿಂದ ಇವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನಾವು ಸಿದ್ದವಿದ್ದು, ಕೂಡಲೇ ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ.
ಅಧ್ಯಕ್ಷ-ಉಪಾಧ್ಯಕ್ಷರು ತಿಂಗಳ ಸಭೆಗಳನ್ನು ಕರೆಯದೆ ಇಷ್ಟಬಂದತೆ ಸಭೆಗಳ ಕರೆಯುತ್ತಿದ್ದಾರೆ. ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಗಳನ್ನು ನಡಾವಳಿ ಪುಸ್ತಕದಲ್ಲಿ ದಾಖಲಿಸುವುದಿಲ್ಲ. ತಮ್ಮ ಇಚ್ಛಾನುಸಾರ ತೀರ್ಮಾನಗಳನ್ನು ಬರೆಯುತ್ತಿದ್ದಾರೆ. ಇದರಿಂದ ನಮಗೆ ಬೇಸರವಾಗಿದೆ, ಆದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷರು ತಮ್ಮ ಸ್ಥಾನದಲ್ಲಿ ಮುಂದುವರೆಯಲು ತಮ್ಮ ಸಮ್ಮತಿ ಇರುವುದಿಲ್ಲ ಎಂದು ತಮ್ಮ ಪತ್ರದಲ್ಲಿ ಈ ಸದಸ್ಯರು ವಿವರಿಸಿದ್ದಾರೆ.
ಅವಿಶ್ವಾಸ ನಿರ್ಣಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಮತ್ತು ಆಯುಕ್ತರಿಗೆ ಸಲ್ಲಿಸಿರುವ ಮನವಿ ಪತ್ರಕ್ಕೆ ಸದಸ್ಯರಾದ ವಾಸಿಲ್ ಆಲಿಖಾನ್, ಎಚ್.ಕೃಷ್ಣ, ಲಕ್ಷ್ಮಿ, ಸಿ.ಕೆ. ಗೋಪಾಲಕೃಷ್ಣ, ವಸಂತ, ವಿಷಕಂಠಮೂರ್ತಿ, ಬಶೀರ್, ಜಬೀವುಲ್ಲಾಖಾನ್ಘೋರಿ, ಕೆ. ಬಸವರಾಜು, ಭಾವಾಸ, ಸಾಕಮ್ಮ, ಅಸ್ಮತ್ ಉನ್ನಿಸಾ, ಅಹಮದ್ಖಾನ್, ಹರ್ಷಿಯಜಬಿನ್, ಬಿ. ಜಯರಾಮು, ಎಂ. ರಾಜು, ಉಮಾ, ಸಿ.ಆರ್. ಭಗವಾನ್, ನೀತಾವಿಶ್ವನಾಥ್, ಅಸ್ಲಮ್, ಅಸ್ಗರ್ ಆಲಿ ಸಹಿಹಾಕಿದ್ದಾರೆ.
ಮನವಿ ಪತ್ರ ಸಲ್ಲಿಸುವಾಗ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ನಗರ ಜೆಡಿಎಸ್ ಅಧ್ಯಕ್ಷ ಎಂ.ಎನ್. ಸತ್ಯನಾರಾಯಣ, ಮುಖಂಡರಾದ ಪಾರ್ಥಸಾರಥಿ, ಎಂ.ಜಿ.ಕೆ. ಪ್ರಕಾಶ್, ಅಕ್ರಮ್ ಸೇರಿದಂತೆ ಪತ್ರಕ್ಕೆ ಸಹಿಹಾಕಿರುವ ಬಹುತೇಕ ಸದಸ್ಯರು ಹಾಜರಿದ್ದರು.
ಗುಪ್ತಸಭೆ: ಅವಿಶ್ವಾಸ ನಿರ್ಣಯಕ್ಕೆ ಅಥವಾ ಸಲ್ಲಿಸುವ ಮುಂಚೆಯೇ ಪರ-ವಿರೋಧ ಸಭೆಗಳು ಪಟ್ಟಣದಲ್ಲಿ ಆರಂಭವಾಗಿರುವುದಾಗಿ ತಿಳಿದು ಬಂದಿದೆ. ಇಂದು ಅವಿಶ್ವಾಸ ಗೊತ್ತುವಳಿ ಸಲ್ಲಿಸಲು ಸಹಿ ಹಾಕುವುದಕ್ಕಾಗಿ ಕರೆದಿದ್ದ ಸಭೆಯಲ್ಲಿ ನಾಲ್ಕೈದು ಮಂದಿ ಗೈರುಹಾಜರಾಗಿದ್ದರು. ಮತ್ತೊಂದೆಡೆ ಸೇರಿದ್ದ ಕೆಲ ಮುಖಂಡರು ಅಧ್ಯಕ್ಷ-ಉಪಾಧ್ಯಕ್ಷರನ್ನು ಹೇಗೆ ಅವಿಶ್ವಾಸ ನಿರ್ಣಯದಿಂದ ಪಾರು ಮಾಡಬೇಕೆಂಬ ಬಗ್ಗೆ ಚರ್ಚಿಸಲು ಗ್ರಾಮೀಣ ಪ್ರದೇಶದ ತೋಟವೊಂದರಲ್ಲಿ ಸಂತೋಷ ಕೂಟ ಏರ್ಪಡಿಸಿದ್ದರೆಂದು ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.