ತುಮಕೂರು: ನಗರಸಭೆಯಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಿದ್ದ ಬಿಜೆಪಿಯ ಯಶೋಧಾ ಗಂಗಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಶುಕ್ರವಾರ ಅವಿಶ್ವಾಸ ನಿರ್ಣಯ ಮಂಡಿಸಿ ಪದಚ್ಯುತಿಗೊಳಿಸಿದರು.
ಯಶೋಧಾ ಗಂಗಪ್ಪ ಸಭೆ ಕರೆಯಲು ವಿಫಲವಾದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಅಸ್ಲಾಂ ಪಾಷಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಜಯ ಸಿಕ್ಕಿತು.
ಈ ಹಿಂದೆ ಸದಸ್ಯರು ತಂದಿದ್ದ ಅವಿಶ್ವಾಸ ಗೊತ್ತುವಳಿ ಕಾನೂನುಬದ್ಧವಾಗಿಲ್ಲ ಎಂದು ಯಶೋಧಾ ಗಂಗಪ್ಪ ಹೈಕೋರ್ಟ್ಗೆ ಡಿಸೆಂಬರ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಆದೇಶದಂತೆ ಎರಡನೇ ಸಲ ಅವಿಶ್ವಾಸ ಸೂಚನೆ ಮಂಡಿಸಲಾಗಿತ್ತು. ಜ. 30ರಂದು ಈ ವಿವಾದ ವಿಚಾರಣೆಗೆ ಬರಲಿದ್ದು, ಶುಕ್ರವಾರ ಮಂಡಿಸಿದ ಅವಿಶ್ವಾಸ ನಿರ್ಣಯ ಕೋರ್ಟ್ ತೀರ್ಪಿಗೆ ಬದ್ಧವಾಗಿರಬೇಕಾಗುತ್ತದೆ.
ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ ಎಲ್ಲ ಸದಸ್ಯರು ಗೈರು ಹಾಜರಾಗಿದ್ದರು. ಕಾಂಗ್ರೆಸ್-ಜೆಡಿಎಸ್ನ 24 ಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಅವಿಶ್ವಾಸ ಪರ ಮತ ಚಲಾಯಿಸಿದರು.
ಬಿಜೆಪಿ ಕೇವಲ 9 ಸದಸ್ಯ ಬಲವನ್ನು ಹೊಂದಿದ್ದು, ಅದರಲ್ಲಿ ಐವರು ಸದಸ್ಯರು ಇತ್ತೀಚೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.