ಬೆಂಗಳೂರು: `ಗೃಹ ಸಚಿವ ಆರ್. ಅಶೋಕ ಮೀರ್ ಸಾದಿಕ್ ರೀತಿ ವರ್ತಿಸುತ್ತಿದ್ದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಕುನಿ ಪಾತ್ರ ನಿರ್ವಹಿಸುತ್ತಿದ್ದಾರೆ~ ಎಂದು ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ನಿವಾಸ `ಅನುಗ್ರಹ~ದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾಜ್ಯದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳು ಪ್ರೇರಕವೂ ಅಲ್ಲ, ಪೂರಕವೂ ಅಲ್ಲ. ಇದೊಂದು ಕೆಟ್ಟ ಪ್ರವೃತ್ತಿ~ ಎಂದು ಬೇಸರ ವ್ಯಕ್ತಪಡಿಸಿದರು.
`ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗುವುದಕ್ಕೆ ನಮ್ಮ ವಿರೋಧವಿಲ್ಲ. ಹೈಕಮಾಂಡ್ ನಿರ್ಧಾರವನ್ನು ಗೌರವಿಸುತ್ತೇವೆ. ಆದರೆ ಸದಾನಂದಗೌಡ ಬಣದ ಬೇಡಿಕೆಗೆ ಮನ್ನಣೆ ನೀಡಬೇಕು. ಇಲ್ಲದಿದ್ದರೆ ಯಡಿಯೂರಪ್ಪ ಬಣದ ಹಾಗೆ, ನಾವೂ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ~ ಎಂದರು.
`ಒಕ್ಕಲಿಗರಲ್ಲಿ ಒಗ್ಗಟ್ಟು ಇಲ್ಲ. ಅಶೋಕ ಅವರು ಸಮುದಾಯದವರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ.ಯಡಿಯೂರಪ್ಪ ಕುತಂತ್ರದಿಂದ ರಾಜ್ಯ ಹಾಳಾಗುತ್ತಿದೆ. ಅವರು ಸರ್ವಾಧಿಕಾರಿ ಧೋರಣೆ ಕೈಬಿಡದಿದ್ದರೆ ರಾಜ್ಯಕ್ಕೆ ಅಪಾಯ ಕಾದಿದೆ. ಬಿಜೆಪಿ ಹೈಕಮಾಂಡ್ ಅನ್ನು ಹೈಜಾಕ್ ಮಾಡಿರುವ ಪ್ರವೃತ್ತಿ ಸರಿಯಲ್ಲ ಎಂದು ಟೀಕಿಸಿದರು.