ಧಾರವಾಡ: ಜಿಲ್ಲಾ ಉತ್ಸವದಲ್ಲಿ ಅಶ್ಲೀಲ ನೃತ್ಯಕ್ಕೆ ಅವಕಾಶ ನೀಡುವ ಮೂಲಕ ಜಿಲ್ಲಾಧಿಕಾರಿಗಳು ಈ ನಾಡಿನ ಸಂಸ್ಕೃತಿಕ ಅಪಮಾನ ಮಾಡಿದ್ದಾರೆ. ಆದ್ದರಿಂದ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ‘ಮೂರು ದಿನಗಳ ಕಾಲ ನಡೆದ ಜಿಲ್ಲಾ ಉತ್ಸವದಲ್ಲಿ ಜಿಲ್ಲಾಧಿಕಾರಿ ದೇಸಿ ಕಲೆ ಮತ್ತು ಸಂಸ್ಕೃತಿಗೆ ಅಪಮಾನವೆಸಗಿ ವಿದೇಶಿ ಸಂಸ್ಕೃತಿಗೆ ರತ್ನಗಂಬಳಿ ಹಾಸಿ ಬರಮಾಡಿಕೊಂಡಿದ್ದಾರೆ. ಈ ನಾಡಿನ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಹೊಂದಿದೆ.
ಆದರೆ, ಇಲಾಖೆಯ ಅಧಿಕಾರಿಗಳು ತಮ್ಮ ಧ್ಯೇಯೋದ್ದೇಶಗಳನ್ನು ಮರೆತು ಉತ್ಸವದಲ್ಲಿ ದೇಸಿ ಕಲೆಗಳಾದ ಜಾನಪದ, ಸುಗಮ ಸಂಗೀತ, ಭರತನಾಟ್ಯ, ದೊಡ್ಡಾಟ ಇವುಗಳಿಗೆ ಹೆಚ್ಚು ಆದ್ಯತೆ ನೀಡದೇ ಹಾಗೂ ಆ ಎಲ್ಲಾ ಕಲಾವಿದರಿಗೆ ಅತೀ ಕನಿಷ್ಟ ಸಂಭಾವನೆ ನೀಡುವ ಮೂಲಕ ಕಲಾವಿದರಿಗೆ ಅಪಮಾನವೆಸಗಿದ್ದಾರೆ. ಸ್ಥಳೀಯ ಕಲಾವಿದರನ್ನು ಎಲ್ಲಾ ರೀತಿಯಿಂದಲೂ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಎಂದು ಆರೋಪಿಸಿದರು.
ಜಿಲ್ಲಾ ಉತ್ಸವದಲ್ಲಿ ಈ ನಾಡಿನ ಸಂಸ್ಕೃತಿಗೆ ಅಪಮಾನವೆಸಗುವಂತಹ ಅರೆಬರೆ ಬಟ್ಟೆತೊಟ್ಟ ಹುಡುಗಿಯರ ಅಶ್ಲೀಲ ನೃತ್ಯಕ್ಕೆ ಅವಕಾಶ ಕಲ್ಪಿಸುವ ಮೂಲಕ ಧಾರವಾಡದ ಸಾಂಸ್ಕೃತಿಕ ವಾತಾವರಣಕ್ಕೆ ಕಪ್ಪುಚುಕ್ಕೆ ಹಚ್ಚಿದ್ದಾರೆ. ನಗರದ ಸಾಂಸ್ಕೃತಿಕ ಪರಂಪರೆಗ ಧಕ್ಕೆ ತಂದಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಯನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಅಷ್ಟೇ ಅಲ್ಲದೇ, ಕರ್ನಾಟಕ ಕಾಲೇಜು ಮೈದಾನದಲ್ಲಿ ಬಂದೋಬಸ್ತ್ಗೆ ನಿಂತಿದ್ದ ವಿದ್ಯಾಗಿರಿ ಠಾಣೆ ಸಿಪಿಐ ಟಿ. ಚನ್ನಕೇಶವ ನಾಡಿನ ಸಾಹಿತಿಗಳೊಂದಿಗೆ, ಮಾಧ್ಯಮದವರೊಂದಿಗೆ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮೂಲಕ ಮುಖ್ಯಮಂತ್ರಿಗೆ ಮನವಿ
ಸಲ್ಲಿಸಿದರು.
ಕಾರ್ಯಕರ್ತರಾದ ಶಿವಸೋಮಣ್ಣ ನಿಟ್ಟೂರ, ಕುಮಾರ ಪಾಟೀಲ, ನಾಶೀರ್ ಖಾಜಿ, ವಸಂತ ನಾಯ್ಕ, ರುದ್ರೇಶ ಹವಳದ, ಪರಮೇಶಿ ರೇವಡಿಹಾಳ, ಜುಬೇರ, ನಾಗರಾಜ ದುದಾನಿ, ಅರ್ಜುನ ವಡ್ಡರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.