ಬೆಂಗಳೂರು: `ಡಾ.ರಾಜ್ಕುಮಾರ್ ಮತ್ತು ಎಸ್.ಪಿ.ವರದರಾಜು ಅವರಲ್ಲಿದ್ದ ದೊಡ್ಡ ಗುಣವೆಂದರೆ ವಿನಯವಂತಿಕೆ. ಪ್ರಸ್ತುತ ನನ್ನನ್ನೂ ಸೇರಿದಂತೆ ಕನ್ನಡ ಚಿತ್ರರಂಗವು ಈ ಗುಣವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ~ ಎಂದು ನಟ ಅಂಬರೀಷ್ ಅಭಿಪ್ರಾಯಪಟ್ಟರು.
ಎಸ್.ಪಿ.ವರದರಾಜು ಆತ್ಮೀಯರ ಬಳಗವು ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದೆ ರಂಗನಾಯಕಮ್ಮ ಮತ್ತು ಹಿರಿಯ ನಟ ಅಶ್ವತ್ಥನಾರಾಯಣ ಅವರಿಗೆ `ಎಸ್.ಪಿ.ವರದರಾಜು~ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
`ನಾನು ಮೊದಲನೇ ಬಾರಿಗೆ ಅಣ್ಣಾವ್ರೊಂದಿಗೆ ನಟಿಸಿದ ಚಿತ್ರ `ಒಡಹುಟ್ಟಿದವರು~. ಆ ಚಿತ್ರಕ್ಕೆ ವರದರಾಜು ಅವರೇ ನಿರ್ಮಾಪಕರಾಗಿದ್ದರು. ಚಿತ್ರೀಕರಣ ಸಂದರ್ಭದಲ್ಲಿ ಎಂದಿನಂತೆ ತಡವಾಗಿ ತೆರಳುತ್ತಿದ್ದೆ. ಆದರೂ ಗದರದೆ ಸಹೋದರಿಬ್ಬರ ವಿನಯ ನುಡಿಗಳನ್ನು ಕಂಡು ಬೆರಗಾಗಿದ್ದೆ~ ಎಂದು ಅವರು ಸ್ಮರಿಸಿದರು.
ರಾಜ್ಕುಮಾರ್ ಸಹೋದರಿ ಎಸ್. ಪಿ.ನಾಗಮ್ಮ, `ವರದರಾಜುವನ್ನು ನೆನಪು ಮಾಡಿಕೊಳ್ಳುತ್ತಿರುವುದು ನನಗೆ ಅತೀವ ಸಂತಸ ತಂದಿದ್ದು, ಪ್ರೀತಿ ಅಭಿಮಾನ ಹೀಗೆ ಇರಲಿ~ ಎಂದು ಭಾವುಕರಾಗಿ ಅಂಬರೀಷ್ ನುಡಿದರು.
ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, `ಸಹೋದರ ವರದರಾಜ್ ಅವರ ಮಾರ್ಗದರ್ಶನದಲ್ಲೇ ರಾಜ್ಕುಮಾರ್ ಕಲಾವ್ಯಕ್ತಿತ್ವ ರೂಪಿಸಿಕೊಂಡರು. ಸಿನಿಮಾದ ಸೊಗಸು ಮತ್ತು ಪ್ರೇಕ್ಷಕನ ಮನಸ್ಸನ್ನು ಹಿಡಿದಿಡುವಲ್ಲಿ ವರದರಾಜು ಅವರಂತಹ ವಿವೇಕಕ್ಕೆ ಮಾತ್ರ ಸಾಧ್ಯವಾಗಿತ್ತು~ ಎಂದು ಹೇಳಿದರು.
ಪ್ರಶಸ್ತಿಯು 10 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.