ನಾಟ್ಯ ಸರಸ್ವತಿ ಸಂಸ್ಥೆಯ ನೃತ್ಯಭಾರತಿ ನಾಟ್ಯ ಹಬ್ಬ ಮಲ್ಲೇಶ್ವರದ ಸೇವಾಸದನದಲ್ಲಿ ನಡೆಯಿತು. 8 ವಿಧದ ನೃತ್ಯ ಶೈಲಿಗಳ ಪ್ರದರ್ಶನದ ಈ ಹಬ್ಬದ ವಿಶೇಷ. ದಂತ ವೈದ್ಯೆ ಮತ್ತು ನೃತ್ಯಪಟು ಡಾ. ಸರಸ್ವತಿ ರಜತೇಶ್ ಅವರು ಸುಮಾರು 15 ವರ್ಷಗಳ ಹಿಂದೆ ಸ್ಥಾಪಿಸಿದ ‘ನಾಟ್ಯ ಸರಸ್ವತಿ’ ಬೇರೆ ಬೇರೆ ರಾಜ್ಯದಲ್ಲಿ ನೃತ್ಯಭಾರತಿ ನಾಟ್ಯ ಹಬ್ಬ ಆಯೋಜಿಸುತ್ತಿದೆ.
ಈ ಸಲದ ಹಬ್ಬದಲ್ಲಿ ಜಯಂತಿ ಮುಖರ್ಜಿ (ಕಥಕ್), ಬಾಲಾ ತ್ರಿಪುರ ಸುಂದರಿ (ಕೂಚಿಪುಡಿ), ಸೌಮ್ಯ ಬೋಸ್ (ಒಡಿಸ್ಸಿ), ದಿವ್ಯಾ (ಮೋಹಿನಿಆಟ್ಟಂ), ದೆಬಾಂಜಲಿ ಬಿಸ್ವಾಸ್ (ಮಣಿಪುರಿ), ಶಿಲ್ಪಾ (ಭರತನಾಟ್ಯ) ಮೃದುಸ್ಮಿತಾ (ಸತ್ರಿಯಾ), ಪ್ರಬಲ್ ಗುಪ್ತಾ (ಕಥಕ್ಕಳಿ) ವಿವಿಧ ನೃತ್ಯ ಪ್ರಕಾರಗಳನ್ನು ಸುಂದರವಾಗಿ ಪ್ರದರ್ಶಿಸಿದರು.
ನಾಟ್ಯ ಸರಸ್ವತಿ ತಂಡದ ದಿವ್ಯ, ನೇಹಾ, ಶಮಿತಾ, ವೈಷ್ಣಮಿ ಮತ್ತು ಅಂಜನ ಅವರ ಶಿವ ತಾಂಡವ ನೃತ್ಯ ಅದ್ಭುತವಾಗಿತ್ತು. ಕೊನೆಯಲ್ಲಿ ಎಲ್ಲ 8 ನೃತ್ಯ ಶೈಲಿಗಳ ಕಲಾವಿದರು ‘ವಂದೇ ಮಾತರಂ’ ಗೀತೆಗೆ ಸಾದರ ಪಡಿಸಿದ ಫ್ಯೂಷನ್ ನೃತ್ಯ ಆಕರ್ಷಕವಾಗಿತ್ತು. ಸೃಷ್ಟಿ ಡ್ಯಾನ್ಸ್ನ ಸತ್ಯನಾರಾಯಣ, ಮಾಜಿ ಸಚಿವ ರೇವಣ್ಣ, ಕೂಚಿಪುಡಿ ಗುರು ವೇದಾಂತಂ ರಾಮು, ಕಲಾತಜ್ಞ ಅಶಿಶ್ ಮೋಹನ್ ಕೋಚರ್, ಗುರು ಲಲಿತಾ ಶ್ರೀನಿವಾಸನ್, ಶ್ರೀದೇವಿ ಉನ್ನಿ ಮತ್ತು ವೇಣುಗೋಪಾಲ್, ಸಂಸ್ಥೆ ಸಂಸ್ಥಾಪಕಿ ಡಾ. ಸರಸ್ವತಿ ರಜತೇಶ್ ಮತ್ತಿತರರು ಹಾಜರಿದ್ದರು.