ಬಾಗೇಪಲ್ಲಿ: ನ್ಯಾಯಬೆಲೆ ಅಂಗಡಿಯಲ್ಲಿ ಪದಾರ್ಥಗಳನ್ನು ಅಸಮರ್ಪಕವಾಗಿ ವಿತರಿಸಲಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ತುರುಕೇಶಪಲ್ಲಿ ಹಾಗೂ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಮಂಗಳವಾರ ತಾಲ್ಲೂಕು ಕಚೇರಿಗೆ ಬೀಗ ಜಡಿದು, ಕಚೇರಿ ಆವರಣದಲ್ಲೇ ಊಟ ಸಿದ್ಧಪಡಿಸಿ ಪ್ರತಿಭಟಿಸಿದರು.
ಕಳೆದ ಮೂರ್ನಾಲ್ಕು ತಿಂಗಳಿನಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಪದಾರ್ಥಗಳ ವಿತರಣೆ ಅಸ್ತವ್ಯಸ್ತವಾಗಿದೆ. ಸರ್ಕಾರದಿಂದ ಆಹಾರ ವಸ್ತುಗಳು ಪೂರೈಕೆಯಾಗಿದ್ದರೂ ಗ್ರಾಮಸ್ಥರಿಗೆ ವಿತರಿಸುತ್ತಿಲ್ಲ ಎಂದು ಗ್ರಾಮಸ್ಥ ರಮೇಶ್ ಆರೋಪಿಸಿದರು.
|ಈ ಕುರಿತು ಹಿಂದೊಮ್ಮೆ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು.ಆದರೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ತುರುಕೇಶಪಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ವಿತರಣೆ ನಿಲ್ಲಿಸಲಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕ ಹಾಗೂ ಆಹಾರ ಸರಬರಾಜು ಇಲಾಖೆ ಅಧಿಕಾರಿಗಳು ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಉಪ ತಹಶೀಲ್ದಾರ್ ನಾರಾಯಣಪ್ಪ, ಆಹಾರ ನಿರೀಕ್ಷಕ ನರಸಿಂಹಮೂರ್ತಿ ಹಾಗೂ ಸಬ್ ಇನ್ಸ್ಪೆಕ್ಟರ್ ಜೆ.ಎನ್.ಆನಂದ್ಕುಮಾರ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು.
ತುರುಕೇಶಪಲ್ಲಿ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿಯ ಹಾಲಿ ಪರವಾನಗಿಯನ್ನು ರದ್ದುಪಡಿಸಿ, ಬೇರೆಯವರಿಗೆ ಪರವಾನಗಿ ನೀಡಬೇಕೆಂದು ಧರಣಿ ನಿರತರು ಪಟ್ಟುಹಿಡಿದರು.]