ಪಂಚಕುಲ, ಹರಿಯಾಣ (ಪಿಟಿಐ): ಸಂಜೋತಾ ಎಕ್ಸ್ಪ್ರೆಸ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷಗಳ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸ್ವಾಮಿ ಅಸೀಮಾನಂದ ಮತ್ತು ಇತರ ನಾಲ್ವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.
ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿರುವ ಎನ್ಐಎ ಅಸೀಮಾನಂದ, ಲೋಕೇಶ್ ಶರ್ಮಾ, ಸಂದೀಪ್ ಡಾಂಗೆ, ರಾಮಚಂದ್ರ ಕಾಲಸಂಗ್ರ ಮತ್ತು ಸುನೀಲ್ ಜೋಶಿ ಅವರು 2007ರ ಫೆಬ್ರುವರಿ 18ರಂದು ಪಾಣಿಪತ್ ಸಮೀಪ ಸಂಜೋತಾ ಎಕ್ಸ್ಪ್ರೆಸ್ ರೈಲಿನಲ್ಲಿ 68 ಜನರ ಸಾವಿಗೆ ಕಾರಣವಾದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಸಂಚುಗಾರರಾಗಿದ್ದಾರೆ ಎಂದು ಆರೋಪಿಸಿದೆ.
ಗುಜರಾತ್ನ ಅಕ್ಷರಧಾಮ ದೇವಾಲಯ, ಜಮ್ಮುವಿನ ರಘುನಾಥ ದೇವಸ್ಥಾನ ಮತ್ತು ವಾರಣಾಸಿಯ ಸಂಕಟ ಮೋಚನ ದೇವಾಲಯಗಳ ಮೇಲೆ ಜಿಹಾದಿಗಳ ದಾಳಿಯ ವಿರುದ್ಧ ಅಸೀಮಾನಂದ ತೀವ್ರ ಆಕ್ರೋಶಕ್ಕೊಳಗಾಗಿದ್ದರು.
ತನ್ನ ಕೋಪವನ್ನು ಸುನಿಲ್ ಜೋಶಿ ಹಾಗೂ ಇತರ ಸಹಚರರೊಂದಿಗೆ ಚರ್ಚಿಸುವಾಗ ಹೊರಗೆಡವಿದ್ದ ಅಸೀಮಾನಂದ, ಜಿಹಾದಿ ಉಗ್ರರು ಮತ್ತು ಭಾರತದಲ್ಲಿನ ಅಲ್ಪಸಂಖ್ಯಾತರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದರು.
ಬಾಂಬ್ಗೆ ಬಾಂಬ್ ದಾಳಿಯೇ ಉತ್ತರ ಎಂದು ತೀರ್ಮಾನಿಸಿದ್ದ ಅಸೀಮಾನಂದ ಪಾಕಿಸ್ತಾನಿ ನಾಗರಿಕರೇ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸುವ ಸಂಜೋತಾ ಎಕ್ಸ್ಪ್ರೆಸ್ ಅನ್ನು ದಾಳಿ ನಡೆಸಲು ಆಯ್ಕೆ ಮಾಡಿಕೊಂಡರು.
ಈ ಬಾಂಬ್ ಸ್ಫೋಟ ನಡೆಸಲು ನೇಮಕಗೊಂಡಿದ್ದ ಉಗ್ರ ಸಂಘಟನೆಗೆ ಅಸೀಮಾನಂದ ಹಣಕಾಸಿನ ಮತ್ತು ತಾರ್ಕಿಕ ನೆರವು ಮಾತ್ರವಲ್ಲದೆ ಭಯೋತ್ಪಾದನಾ ಕೃತ್ಯ ಎಸಗಲು ತನ್ನ ಸಹಚರರನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಎನ್ಐಎ ಆರೋಪಿಸಿದೆ.