ರಾಯಚೂರು: ಇಲ್ಲಿನ ಎಫ್ಪಿಎ ಕಚೇರಿಯಲ್ಲಿ ಜಿಲ್ಲಾ ಗ್ರಾಮೀಣ ಪ್ರಥಮ ಚಿಕಿತ್ಸಕರಿಗೆ, ಸರ್ಕಾರಿ, ಅರೆಸರ್ಕಾರಿ ವೈದ್ಯರಿಗೆ, ಹಿರಿಯ, ಕಿರಿಯ ಆರೋಗ್ಯ ಸಹಾಯಕರಿಗೆ ಭಾರತೀಯ ಕುಟುಂಬ ಯೋಜನಾ ಸಂಘದವತಿಯಿಂದ ಅಸುರಕ್ಷಿತ ಗರ್ಭಪಾತ ತಡೆಗಟ್ಟುವ ಬಗ್ಗೆ ಮಾಹಿತಿ ಕಾರ್ಯಕ್ರಮ ಈಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ.ವಿ.ಜಿ ಕುಲಕರ್ಣಿ ಮಾತನಾಡಿ, ಭಾರತ ರಾಷ್ಟ್ರವು ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದಿದ್ದರೂ ತಾಯಂದಿರ ಮರಣದ ಪ್ರಮಾಣ ಕಡಿಮೆ ಮಾಡುವಲ್ಲಿ ಹಿಂದುಳಿದಿದೆ. ತಾಯಂದಿರ ಮರಣದ ಪ್ರಮಾಣ ಹೆಚ್ಚಾಗಲು ಅಸುರಕ್ಷಿತ ಗರ್ಭಪಾತ ಮುಖ್ಯ ಕಾರಣ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಎಫ್ಪಿಎ ಇಂಡಿಯಾ ಗೌರವ ಕಾರ್ಯದರ್ಶಿ ಡಾ.ಸಿ.ಎನ್ ಕುಲಕರ್ಣಿ ಮಾತನಾಡಿ, ಅಸುರಕ್ಷಿತ ಗರ್ಭಪಾತ ಮತ್ತು ಮಾರಣಾಂತಿಕ ರೋಗ ಡೆಂಗೆ ಜ್ವರಕ್ಕೆ ಈ ಭಾಗದ ಜನರು ತುತ್ತಾಗುತ್ತಿದ್ದು, ಡೆಂಗೆ ಜ್ವರದಿಂದ ಮುಕ್ತರಾಗುವಂತೆ ಮಾಡಲು ಎಲ್ಲರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಎಫ್ಪಿಎ ಇಂಡಿಯಾದಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಸೇವೆ ಸೌಲಭ್ಯಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಗ್ರಾಮೀಣ ಪ್ರಥಮ ಚಿಕಿತ್ಸಕರ ಸಂಘದ ಅಧ್ಯಕ್ಷ ಚುನ್ನುಮಿಯಾ, ಎಫ್ಪಿಎ ಇಂಡಿಯಾದ ಉಪಾಧ್ಯಕ್ಷೆ ಅಲಿಯಾಖಾನಂ, ವೈದ್ಯಾಧಿಕಾರಿಗಳಾದ ಡಾ.ಶ್ವೇತಾ, ಡಾ.ಅನುರಾಧ, ಶಾಖೆಯ ವ್ಯವಸ್ಥಾಪಕ ಭೂಷಣಗೌಡ, ಕಾರ್ಯಕ್ರಮ ಅಧಿಕಾರಿ ಭೀಮರಾಯ, ಪ್ರಥಮ ಚಿಕಿತ್ಸಕರ ಸಂಘದ ಪದಾಧಿಕಾರಿಗಳಾದ ಶೇಖ ಮಹೆಬೂಬ್, ನಜೀರ್, ಪ್ರಸನ್ನ, ವೆಂಕಟೇಶ, ಆರೋಗ್ಯ ಸಹಾಯಕರಾದ ಶೋಭಾರಾಣಿ, ಸಮಾಜ ಕಾರ್ಯಕರ್ತ ವೇಣುಗೋಪಾಲ, ಕಾರ್ಯಾಲಯದ ಸಹಾಯಕ ಗುರುನಾಥ, ಈರಮ್ಮ, ಜಗನ್ನಾಥ, ಪ್ರತಾಪ್, ಹಮೀದ್ ಹಾಗೂ ಮತ್ತಿತರರಿದ್ದರು.