ನವದೆಹಲಿ (ಪಿಟಿಐ): ಸಂಕಷ್ಟದಲ್ಲಿ ಸಿಲುಕಿ ಭಾರಿ ಸಂಖ್ಯೆಯಲ್ಲಿ ವಿಮಾನಯಾನಗಳನ್ನು ರದ್ದು ಪಡಿಸಿರುವ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಮಂಗಳವಾರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು. ಆದರೆ ವಿಮಾನಯಾನ ಅಸ್ತವ್ಯಸ್ತತೆಗಾಗಿ ಸಂಸ್ಥೆಯ ವಿರುದ್ಧ ~ದಂಡನಾ ಕ್ರಮ~ ಕೈಗೊಳ್ಳುವ ಸಾಧ್ಯತೆಗಳಿಲ್ಲ ಎಂದು ಇದೇ ಸಮಯದಲ್ಲಿ ಸ್ಪಷ್ಟ ಪಡಿಸಿತು.
~ಈ ಕ್ಷಣದಲ್ಲಿ ದಂಡನಾ ಕ್ರಮದ ಬಗ್ಗೆ ಮಾತನಾಡದೇ ಇರೋಣ. ಏರ್ ಲೈನ್ ಸಂಸ್ಥೆಯು ತನ್ನ ಸ್ವಸ್ಥಿತಿಗೆ ಮರಳುವಂತೆ ನೋಡಿಕೊಳ್ಳುವುದರ ಕಡೆಗಷ್ಟೇ ನಮ್ಮ ಗಮನ~ ಎಂದು ಎಂದು ಡಿಜಿಸಿಎ ಮುಖ್ಯಸ್ಥ ಇ.ಕೆ. ಭರತ್ ಭೂಷಣ್ ಅವರು ಕಿಂಗ್ ಫಿಶರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಜಯ್ ಅಗರ್ ವಾಲ್ ಮತ್ತು ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಹಿತೇಶ್ ಜೊತೆಗೆ ಮಾತನಾಡಿದ ಬಳಿಕ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ತನ್ನ ವಿಮಾನಯಾನಗಳ ಹಠಾತ್ ಸ್ಥಗಿತಕ್ಕೆ ಮುನ್ನ ಡಿಜಿಸಿಎಯಿಂದ ಮುಂಜಾಗರೂಕತಾ ಒಪ್ಪಿಗೆ ಪಡೆಯದೇ ವಿಮಾನಯಾನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಿಂಗ್ ಫಿಶರ್ ವಿರುದ್ಧ ಡಿಜಿಸಿಎ ಶಿಸ್ತು ಕ್ರಮ ಕೈಗೊಳ್ಳುವುದೇ ಎಂದು ಭೂಷಣ್ ಅವರನ್ನು ಪತ್ರಕರ್ತರು ಪ್ರಶ್ನಿಸಿದರು.
ಈದಿನ ದೇಶಾದ್ಯಂತ 40ಕ್ಕೂ ಹೆಚ್ಚು ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಂಸ್ಥೆಯು ಡಿಜಿಸಿಎ ಗೆ ತಿಳಿಸಿತು.
ತನ್ನ ವಿಮಾನಯಾನ ಸೇವೆಗಳನ್ನು ಯದ್ವಾತದ್ವ ಕಡಿತಗೊಳಿಸುತ್ತಿರುವ ಬಗ್ಗೆ ವಿವರಣೆ ನೀಡುವಂತೆ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ಡಿಜಿಸಿಎ ಸಮನ್ಸ್ ಜಾರಿ ಮಾಡಿತ್ತು.
~ಮಾತುಕತೆ ಉತ್ತಮವಾಗಿತ್ತು. ಡಿಜಿಸಿಎ ಕೆಲವು ಮಾಹಿತಿಯನ್ನು ಕೇಳಿದ್ದು, 24 ಗಂಟೆಗಳಲ್ಲಿ ಅದನ್ನು ಒದಗಿಸಲಾಗುವುದು ಎಂದು ಅಗರ್ ವಾಲ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.