ಗುವಾಹಟಿ (ಪಿಟಿಐ): ಪ್ರವಾಹ ಪೀಡಿತ ಅಸ್ಸಾಂಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋಮವಾರ 500 ಕೋಟಿ ರೂಪಾಯಿಗಳ ಪರಿಹಾರ ಕೊಡುಗೆಯನ್ನು ಘೋಷಿಸಿದ್ದಾರೆ. ಇತ್ತೀಚೆಗೆ ಅತ್ಯಂತ ತೀವ್ರ ಪ್ರವಾಹದ ಹಾವಳಿಗೆ ತುತ್ತಾದ ಅಸ್ಸಾಂನಲ್ಲಿ 77 ಜನ ಮೃತರಾಗಿ ಸುಮಾರು 5 ಲಕ್ಷ ಜನ ನಿರ್ವಸಿತರಾಗಿದ್ದರು.
ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರವಾಹ ಪೀಡಿತ ಪ್ರದೇಶಗಳಾದ ಜೊರ್ಹಾತ್, ಧೇಮಜಿ ಮತ್ತು ದಕ್ಷಿಣ ದಿನಾಜ್ ಪುರ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಹದಿಂದ ಆದ ಜೀವಹಾನಿ ಮತ್ತು ಆಸ್ತಿಪಾಸ್ತಿ ಹಾನಿಯ ವೀಕ್ಷಣೆ ಮಾಡಿದ್ದರು.
ಪ್ರವಾಹಕ್ಕೆ ಬಲಿಯಾದ 77 ಜನರ ವಾರಸುದಾರರಿಗೆ ತಲಾ ಒಂದು ಲಕ್ಷ ರೂಪಾಯಿಗಳ ನೆರವನ್ನೂ ಘೋಷಿಸಿದರು.
ಅಸ್ಸಾಂನಿಂದ ರಾಜ್ಯಸಭೆಯ ಸದಸ್ಯರೂ ಆಗಿರುವ ಸಿಂಗ್ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರ ರಕ್ಷಣೆಗೆ ಮತ್ತು ಅವರಿಗೆ ಪರಿಹಾರ ಒದಗಿಸಲು ಆದ್ಯತೆ ನೀಡಲಾಗುವುದು ಹೇಳಿದರು.
ರಾಷ್ಟ್ರೀಯ ಪ್ರಕೋಪ ಪರಿಹಾರ ಪಡೆಯ 640 ಸಿಬ್ಬಂದಿಯನ್ನು ಒಳಗೊಂಡ 16 ತಂಡಗಳು ಮತ್ತು 71 ದೋಣಿಗಳನ್ನು ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ನುಡಿದರು.