ಗುವಾಹಟಿ (ಪಿಟಿಐ): ಅಸ್ಸಾಂನ ಮಾಜಿ ಪೊಲೀಸ್ ಮಹಾನಿರ್ದೇಶಕ ಶಂಕರ್ ಬರುವಾ ಬುಧವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾರದಾ ಚಿಟ್ ಫಂಡ್ನ ಬಹುಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ ಕಳೆದ ತಿಂಗಳು ಅವರ ನಿವಾಸದಲ್ಲಿ ಸಿಬಿಐ ಶೋಧ ನಡೆಸಿತ್ತು.
‘ಇಲ್ಲಿನ ತಮ್ಮ ನಿವಾಸದ ತಾರಸಿಯಲ್ಲಿ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡ ಬರುವಾ ಅವರನ್ನು ಕುಟುಂಬದ ಸದಸ್ಯರು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ತನಿಖೆ ಆರಂಭಗೊಂಡಿದೆ. ನಂತರವಷ್ಟೇ ಘಟನೆಯ ಬಗ್ಗೆ ವಿವರ ನೀಡಲು ಸಾಧ್ಯ’ ಎಂದು ಗುವಾಹಟಿಯ ಹಿರಿಯ ಪೊಲೀಸ್ ಅಧೀಕ್ಷಕ ಎ.ಪಿ. ತಿವಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಶಾರದಾ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದ ನಂತರ ಖಿನ್ನತೆಗೊಳಗಾಗಿದ್ದರು. ಕಳೆದ ವಾರ ಎದೆನೋವು ಕಾಣಿಸಿಕೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಬುಧವಾರ ಬೆಳಿಗ್ಗೆಯಷ್ಟೇ ಮನೆಗೆ ಕರೆತರಲಾಗಿತ್ತು ಎಂದು ಬರುವಾ ಕುಟುಂಬದ ಮೂಲಗಳು ತಿಳಿಸಿವೆ.
‘ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ ಅರ್ಧ ಗಂಟೆಯಲ್ಲಿ ಅವರು ಮನೆಯ ತಾರಸಿಗೆ ತೆರಳಿ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದೆವು’ ಎಂದು ಸಂಬಂಧಿಗಳು ತಿಳಿಸಿದ್ದಾರೆ.
ಶಾರದಾ ಚಿಟ್ ಫಂಡ್ ಹಗರಣದಲ್ಲಿ ಬರುವಾ ಅವರು ಶಾಮೀಲಾಗಿರುವ ಬಗ್ಗೆ ಸುದ್ದಿವಾಹಿನಿಗಳಲ್ಲಿ ನಿರಂತರವಾಗಿ ಪ್ರಸಾರವಾಗುತ್ತಿದ್ದ ವರದಿಗಳಿಂದ ಅವರು ಬೇಸರಗೊಂಡಿದ್ದರು ಎಂದು ಅವರು ಹೇಳಿದ್ದಾರೆ.
ಆದರೆ, ಶಾರದಾ ಹಗರಣಕ್ಕೆ ಸಂಬಂಧಿಸಿ ಬರುವಾ ಅವರನ್ನು ವಿಚಾರಣೆಗೊಳಪಡಿಸಿಲ್ಲ. ಅವರ ಬಂಧನಕ್ಕೆ ಸಮನ್ಸ್ ಕೂಡಾ ಜಾರಿಯಾಗಿಲ್ಲ ಎಂದು ಸಿಬಿಐನ ವಕ್ತಾರರು ಹೇಳಿದ್ದಾರೆ.
ಶಾರದಾ ಚಿಟ್ ಫಂಡ್ ವ್ಯವಹಾರದಲ್ಲಿ ವಂಚನೆ ಮಾಡಿದ್ದ ಅದೇ ಸಂಸ್ಥೆಯ ಸಿಬ್ಬಂದಿಯೋರ್ವನಿಗೆ ಬರುವಾ ರಕ್ಷಣೆ ನೀಡಿದ್ದರು ಎಂಬ ಆರೋಪ ಇತ್ತು.
ಹಗರಣದ ಸಂಬಂಧ ಆಗಸ್ಟ್ 28ರಂದು ಅಸ್ಸಾಂನ ಇಬ್ಬರು ಮಾಜಿ ಸಚಿವರ ನಿವಾಸಗಳೂ ಸೇರಿದಂತೆ 12 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿತ್ತು.