ಗುವಾಹಟಿ (ಐಎಎನ್ಎಸ್): ಅಸ್ಸಾಂನಲ್ಲಿ ಕೋಮು ಗಲಭೆಯಿಂದ ಉಂಟಾದ ಹಿಂಸಾಚಾರಕ್ಕೆ ಬಾಂಗ್ಲಾದೇಶದಿಂದ ಬಂದ ವಲಸಿಗರೇ ಕಾರಣ ಎಂದು ಮಂಗಳವಾರ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಆರೋಪಿಸಿದರು.
ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಈ ಬಿಕ್ಕಟ್ಟನ್ನು ಬಗೆಹರಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ~ ಎಂದು ಹೇಳಿದರು.
`ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರಾಜಕೀಯ ತಂತ್ರದ ಪರಿಣಾಮ ಬಾಂಗ್ಲಾದೇಶದವರು ಅಕ್ರಮವಾಗಿ ವಲಸೆ ಬಂದು ದೊಡ್ಡ ಪ್ರಮಾಣದಲ್ಲಿ ಭೂಮಿ ಕಬಳಿಸಿರುವುದರಿಂದ, ಸ್ವಂತ ನೆಲದಲ್ಲೇ ಅಸ್ಸಾಂನ ಜನರಿಗೆ ಅಭದ್ರತೆಯ ಭಯ ಕಾಡುತ್ತಿದೆ~ ಎಂದು ಅಡ್ವಾಣಿ ತಿಳಿಸಿದರು.
ಅಷ್ಟೇ ಅಲ್ಲದೇ ಸ್ವಂತ ನೆಲದಲ್ಲೇ ಬೋಡೊಗಳನ್ನು ಕೀಳಾಗಿ ಕಾಣುವಂತ ಪರಿಸ್ಥಿತಿ ಉದ್ಭವಿಸಿದ್ದು, ಇದರಿಂದ ಬೋಡೊಗಳು ಜನಾಂಗೀಯ ಸಮಸ್ಯೆಯನ್ನು ಕೂಡ ಎದುರಿಸುವಂತಾಗಿದೆ ಎಂದು ಹೇಳಿದರು.
ಕಳೆದ ಒಂದು ವಾರದಿಂದ ಅಸ್ಸಾಂ ಬೋಡೊಗಳು ಹಾಗೂ ಬಾಂಗ್ಲಾದೇಶದಿಂದ ವಲಸೆ ಬಂದ ಬಂಗಾಳಿ ಭಾಷಿಕ ಮುಸ್ಲಿಮರ ನಡುವಿನ ಜನಾಂಗೀಯ ಕದನದಿಂದ ಹೊತ್ತಿ ಉರಿಯುತ್ತಿದೆ. ಬೋಡೊ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಇಲ್ಲಿನ ನಾಲ್ಕು ಜಿಲ್ಲೆಗಳಲ್ಲಿ ಹಿಂಸೆ ಭುಗಿಲೆದ್ದಿದೆ.
ಈ ಗಲಭೆ ಇವರೆಗೆ 56ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. 2 ಲಕ್ಷಕ್ಕೂ ಹೆಚ್ಚು ಜನ ಮನೆ, ಜಾನುವಾರುಗಳನ್ನು ತೊರೆದು ಓಡಿಹೋಗಿದ್ದಾರೆ. ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.