ಗುವಾಹಟಿ (ಪಿಟಿಐ): ಕಾಂಗ್ರೆಸ್ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗ್ಗೆ ಜನತೆ ಬೇಸರಗೊಂಡಿರುವುದರಿಂದ ಈ ಬಾರಿ ಅಸ್ಸಾಂನಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಸರ್ಕಾರ ರಚಿಸುವುದು ನಿಶ್ಚಿತ ಎಂದು ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.‘ಸ್ವಂತ ಶಕ್ತಿಯಿಂದ ಸರ್ಕಾರ ರಚಿಸುವುದು ನಮ್ಮ ಗುರಿ. ಬಿಹಾರದಲ್ಲಿ ನಾವು ಶೇ 99ರಷ್ಟು ಯಶಸ್ಸು ಗಳಿಸಿದ್ದೇವೆ. ಪಂಜಾಬ್ನಲ್ಲಿ 23ರಲ್ಲಿ 19 ಸ್ಥಾನಗಳನ್ನು ಗೆದ್ದಿದ್ದೇವೆ. ಜನ ನೀಡುವಾಗ ಉದಾರವಾಗಿಯೇ ನೀಡುತ್ತಾರೆ’ ಎಂದು ಅವರು ಮಂಗಳವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳದ್ದರಿಂದ ಮತ ವಿಭಜನೆಯಾಗಿ ಕಾಂಗ್ರೆಸ್ಗೆ ಲಾಭವಾದೀತೇ ಎಂದು ಕೇಳಿದಾಗ, ಪ್ರತಿ ಬಾರಿಯೂ ಮತ ವಿಭಜನೆ ನಡೆಯಲೇಬೇಕೆಂದಿಲ್ಲ ಎಂದು ಸುಷ್ಮಾ ನುಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗ್ಗೆ ಜನ ಭ್ರಮನಿರಸನಗೊಂಡಿದ್ದಾರೆ. ಇಲ್ಲಿ ಮತ ವಿಭಜನೆಗೊಳ್ಳದೆ ಒಗ್ಗೂಡಲಿದೆ ಎಂದು ಅವರು ವಿಶ್ಲೇಷಿಸಿದರು.