ಮದ್ದೂರು: ತಾಲ್ಲೂಕಿನ ಕೊಪ್ಪ ಹೋಬಳಿಯ ವಿವಿಧ ಗ್ರಾಮಗಳಿಗೆ ಸಂಸದೆ ರಮ್ಯಾ ಭಾನುವಾರ ಭೇಟಿ ನೀಡಿ ಜನರಿಂದ ವಿವಿಧ ಸಮಸ್ಯೆಗಳ ಕುರಿತು ಅಹವಾಲು ಸ್ವೀಕರಿಸಿದರು.
ಕೊಪ್ಪ ವ್ಯಾಪ್ತಿಯ ದೊಡ್ಡಹೊಸಗಾವಿ, ಆಬಲವಾಡಿ, ಕೊಪ್ಪ, ನಂಬಿನಾಯಕನಹಳ್ಳಿ, ಗೂಳೂರು, ಗೂಳೂರುದೊಡ್ಡಿ, ಮೂಡಲದೊಡ್ಡಿ, ಚೊಟ್ಟನಹಳ್ಳಿ, ಕೋಣಸಾಲೆ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಜನರಿಗೆ ರಸ್ತೆ, ಕುಡಿಯುವ ನೀರು, ಸಮುದಾಯ ಭವನ ಸೇರಿದಂತೆ ವಿವಿಧ ಸಮಸ್ಯೆಗಳ ಮನವಿ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು, ನನಗೆ ಸಿಕ್ಕಿರುವ ಆರೇಳು ತಿಂಗಳಿನಲ್ಲಿ ಲಭ್ಯವಿರುವ ಅನುದಾನದಲ್ಲಿ ಅಗತ್ಯ ಕೆಲಸಗಳನ್ನು ಮಾಡಲು ಯೋಜಿಸಿದ್ದೇನೆ. ನಿಮ್ಮ ಆರ್ಶೀವಾದ ಮುಂದೆಯು ಸಿಕ್ಕಿದರೆ ಇಡೀ ಮಂಡ್ಯ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಕನಸು ನನ್ನದಾಗಿದೆ ಎಂದರು.
ಮಾಜಿ ಶಾಸಕ ಕೆ.ಸುರೇಶಗೌಡ, ಜಿಪಂ ಸದಸ್ಯ ಶಿವಲಿಂಗೇಗೌಡ, ತಾಪಂ ಅಧ್ಯಕ್ಷೆ ಲಕ್ಷ್ಮಿಚನ್ನರಾಜು, ಸದಸ್ಯರಾದ ಮಂಗಳ, ಸುನಂದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಟಿ.ಕರೀಗೌಡ, ಮುಖಂಡರಾದ ಸಿ.ಸೋಮೇಗೌಡ, ದೊಡ್ಡಣ್ಣ, ಕೊಪ್ಪ ಕೃಷ್ಣ, ನಂಜುಂಡಯ್ಯ, ರಮೇಶ್, ವಿಶ್ವಕರ್ಮ ಜನಾಂಗದ ಮುಖಂಡರಾದ ಲಕ್ಷ್ಮಣಾಚಾರಿ, ಬಿ.ಎಂ.ರವಿ, ರಾಹುಲ್ ದ್ರಾವಿಡ್ ಬಳಗದ ಅನಿಲ್ ಕುಮಾರ್ ಸೇರಿದಂತೆ ಹಲವರು ಇದ್ದರು.