ಬೆಂಗಳೂರು: `ಗಾಂಧೀ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ,
ಅಂದು ಮಾಡಿದ ತ್ಯಾಗ ಈಗಿನವರಿಗೆ ತಿಳಿದಿಲ್ಲ, ಒಂದಿಗೆ ಬಾಳುವ ಬುದ್ಧಿ ಇನ್ನೂ ಬಂದಿಲ್ಲ...~
ಈ ಹಾಡಿನ ಮೂಲಕ ಪುಟ್ಟ ಬಾಲಕಿ ಅನ್ವಿತ ಪ್ರಪಂಚದ ಇಂದಿನ ಸ್ಥಿತಿಗಳನ್ನು ಬಿಚ್ಚಿಟ್ಟಳು. ಮತ್ತೆ ಹುಟ್ಟಿ ಬಾ ಎಂದು ಮಹಾತ್ಮ ಗಾಂಧಿ ಅವರನ್ನು ಆಹ್ವಾನಿಸಿದಳು. ಹಾಡು ಮುಗಿದಾಗ ಪ್ರೇಕ್ಷಕರಿಂದ ತುಂಬು ಚಪ್ಪಾಳೆ, ಹರ್ಷೋದ್ಗಾರ...
ರಾಜಭವನ, ಬೆಂಗಳೂರು ದೂರದರ್ಶನ ಕೇಂದ್ರ ಹಾಗೂ ಸರ್ವೋದಯ ಅಂತರರಾಷ್ಟ್ರೀಯ ಟ್ರಸ್ಟ್ ಸಂಯುಕ್ತವಾಗಿ ನಗರದ ರಾಜಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಗಾಂಧಿ ಜಯಂತಿ - ಅಹಿಂಸಾ ಮಹೋತ್ಸವ~ ನೃತ್ಯ ಮತ್ತು ಗೀತ ನಮನ ಕಾರ್ಯಕ್ರಮ ಪ್ರೇಕ್ಷಕರ ಮನ ಸೂರೆಗೊಂಡಿತು.
ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ರಾಷ್ಟ್ರಪಿತನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಾಂಧಿ ಅವರಿಗೆ ಅತ್ಯಂತ ಪ್ರಿಯವಾದ `ವೈಷ್ಣವ ಜನ ತೋ ತೇನೆ ಕಹಿಯೇ ಜೆ ಪೀಡ್ ಪರಾಯಿ ಜಾನೆ ರೇ...~ ಭಜನೆಗೆ ಗಾಯಕಿ ಸ್ಮಿತಾ ಬೆಳ್ಳೂರು ದನಿಗೂಡಿಸಿದರು.
ಸಮತ್ವಂ ತಂಡದಿಂದ `ಈಶ್ವರ್ ಅಲ್ಲಾ ತೇರೋ ನಾಮ್~ ನೃತ್ಯ ರೂಪಕ ನಡೆಯಿತು. ವಿವಿಧ ಧಾರ್ಮಿಕ ಮುಖಂಡರು ಧರ್ಮ ಗ್ರಂಥಗಳನ್ನು ಪಠಿಸಿದರು. ನೃತ್ಯ ಕಲಾವಿದರಾದ ಮಾನಸ ಜೋಷಿ ಮತ್ತು ಬಿ.ಪಿ. ಸ್ವೀಕೃತ್ ದ್ವಂದ್ವ ನೃತ್ಯ ಪ್ರದರ್ಶಿಸಿದರು.
ಮೊನೀಷಾ ಆರ್ಟ್ಸ್ ವಿದ್ಯಾರ್ಥಿಗಳು ಸದ್ಭಾವನಾ ನೃತ್ಯ ನೋಡುಗರ ಗಮನ ಸೆಳೆಯಿತು. `ಆಂಕ್ಲಂಗ್~ ಬಿದಿರಿನ ಸಂಗೀತ ಉಪಕರಣಗಳನ್ನು ಬಳಸಿ ಸಂಗೀತ ಕಲಾವಿದೆ ಅನಸೂಯ ಕುಲಕರ್ಣಿ ಮತ್ತು ತಂಡದವರು ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕ ಮಹೇಶ್ ಜೋಷಿ ಮತ್ತು ತಂಡದವರು ಗಾಂಧಿನಗರ ಚಲನಚಿತ್ರ ಸಂಯೋಜಿಸಿರುವ `ರಘುಪತಿ ರಾಘವ ರಾಜಾರಾಂ~ ಗೀತೆಯನ್ನು ಹಾಡಿ ರಂಜಿಸಿದರು.
ಫ್ರಾಂಕ್ ಅಂತೋಣಿ ಪಬ್ಲಿಕ್ ಶಾಲೆಯ ಮಕ್ಕಳು ಜಾನ್ ಹೆನ್ರಿ ನ್ಯೂಮನ್ ಬರೆದ ಗಾಂಧೀಜಿಯವರ ಮೆಚ್ಚಿನ `ಲೀಡ್ ಕೈಂಡ್ಲಿ ಲೈಟ್~ ಹಾಗೂ ಕ್ರಿಸ್ತ ಭಜನೆ `ಅಬೈಡ್ ವಿತ್ ಮಿ~ ಗೀತೆಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ಭಾರದ್ವಾಜ್, ಕಲಾವಿದ ಡಾ. ಅನಿಲ್ ಕುಮಾರ್ ರಚಿಸಿದ ಗಾಂಧೀಜಿ ಭಾವಚಿತ್ರವನ್ನು ಬಿಡುಗಡೆ ಮಾಡಿದರು.
ಆರ್ಚ್ ಬಿಷಪ್ ಬರ್ನಾರ್ಡ್ ಮೊರೆಸ್, ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಜಾಮಿಯಾ ಮಸೀದಿಯ ಧಾರ್ಮಿಕ ಮುಖಂಡ ಎಂ. ರಿಯಾಜ್ ಉರ್ ರೆಹಮಾನ್, ಮಹಾಬೋಧಿ ಸೊಸೈಟಿಯ ಆನಂದ ಭಂತೇಜಿ, ಗುರುಸಿಂಗ್ ಸಭಾದ ಅಧ್ಯಕ್ಷ ಸರ್ದಾರ್ ಗುರುಶರಣ್ ಸಿಂಗ್, ಹೈಕೋರ್ಟ್ ನ್ಯಾಯಮೂರ್ತಿ ಕೆ. ಶ್ರೀಧರ ರಾವ್, ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತೂರು ಕೃಷ್ಣಮೂರ್ತಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.