ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹೋರಾತ್ರಿ ವರ್ತಕರ ಸಭೆ

Last Updated 22 ಫೆಬ್ರುವರಿ 2012, 6:35 IST
ಅಕ್ಷರ ಗಾತ್ರ

ಗಂಗಾವತಿ: ನಗರದ ಜನತೆ ಬಹು ದಿನಗಳಿಂದ ನಿರೀಕ್ಷಿಸುತ್ತಿರುವ ಅತಿಕ್ರಮಣ ತೆರವು ಕಾರ್ಯಾಚರಣೆಯ ಪ್ರಹಸನ ಆರಂಭಗೊಂಡು ಕೇವಲ ಒಂದು ಗಂಟೆಯೊಳಗೆ ವಿಚಿತ್ರ ತಿರುವು ಪಡೆದು ಸ್ಥಗಿತವಾಯಿತು. ವಿಸ್ತರಣೆ ಕಾರ್ಯಕ್ಕೆ ಮತ್ತೆ ಎಪ್ರಿಲ್ 10 ಮುಹೂರ್ತ ನಿಗದಿ ಮಾಡಲಾಗಿದೆ.

ಸ್ವತಃ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರೇ ಕೊಪ್ಪಳದಿಂದ ಬೆಳಗ್ಗೆ 5.30ಕ್ಕೆ ನಗರಕ್ಕೆ ಆಗಮಿಸಿ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದರು. ನೂರಾರು ನಗರಸಭಾ ಸಿಬ್ಬಂದಿ, ರಕ್ಷಣೆ ಒದಗಿಸಲು ಪೊಲೀಸರ ಪಡೆ ಸಿದ್ದವಾಗಿದ್ದವು.   

ಜೆಸಿಬಿ ಸದ್ದು ಮಾಡುತ್ತಲೇ ರಸ್ತೆಗಿಳಿದವು. ಮಹಾಶಿವರಾತ್ರಿ ಬಳಿಕದ ಮಹಾ ಅಮಾವಸ್ಯೆಯಂದು ಅಂಗಡಿ ಮುಂಗಟ್ಟುಗಳಲ್ಲಿ ಪೂಜೆ ಮಾಡುವ ನಿರೀಕ್ಷೆಯೊಂದಿಗೆ ಇದ್ದ ವರ್ತಕರಿಗೆ ಬೆಳ್ಳಂಬೆಳಗ್ಗೆ  ಜಿಲ್ಲಾಧಿಕಾರಿ ಕಾರ್ಯಾಚರಣೆಯ ಮೂಲಕ ಶಾಕ್ ನೀಡಿದರು.

ಅಹೋರಾತ್ರಿ ಸಭೆ: ರಸ್ತೆ ವಿಸ್ತರಣೆಗೆ ಕೈಹಾಕದಿರುವಂತೆ, ಸಮಯಾವಕಾಶ ನೀಡುವಂತೆ, ಜಿಲ್ಲಾಡಳಿತ ನಿಗದಿ ಮಾಡಿದ್ದಕ್ಕಿಂತ ಕಡಿಮೆ ಸ್ಥಳ ಮಾತ್ರ ತೆರವು ಮಾಡುವಂತೆ ನಾನಾ ವಿಷಯಗಳನ್ನು ಹಿಡಿದು ರಸ್ತೆಯ ಬದಿಯ ವರ್ತಕರು ಶಾಸಕ ಮುನವಳ್ಳಿ ಅವರ ನಿವಾಸದಲ್ಲಿ ಸೋಮವಾರ ತಡ ರಾತ್ರಿವರೆಗೂ ಸಭೆ ನಡೆಸಿದರು.

ವರ್ತಕರ ಒತ್ತಡಕ್ಕೆ ಮಣಿದ ಶಾಸಕ ಪರಣ್ಣ ಮುನವಳ್ಳಿ, ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿ ಕೊಡಲು ಯತ್ನಿಸಿದರು. ಆದರೆ ಜಿಲ್ಲಾಧಿಕಾರಿ ಶಾಸಕರ ಮನವಿಗೆ ಕಿವಿಗೊಡದ್ದರಿಂದ ಯಾವುದೆ ಪ್ರಯೋಜನ ದೊರೆಯಲಿಲ್ಲ  ಎನ್ನಲಾಗಿದೆ.

ಮಂಗಳವಾರ ಕಾರ್ಯಾಚರಣೆ ಆರಂಭವಾದ ಬಳಿಕ ಸ್ಥಳಿಯ ಚುನಾಯಿತರು ಸರ್ಕಾರದ ಹಂತದಲ್ಲಿ ಚರ್ಚಿಸಿ ಜಿಲ್ಲಾಧಿಕಾರಿ ಮೇಲೆ ಒತ್ತಡ ತರುವಲ್ಲಿ ಸಫಲರಾದರು. ಬಳಿಕವಷ್ಟೆ ಜಿಲ್ಲಾಧಿಕಾರಿ ವಿಸ್ತರಣೆ ಕಾರ್ಯಕ್ಕೆ ಗಡುವು ನೀಡಲು ಒಪ್ಪಿದರು ಎನ್ನಲಾಗಿದೆ.    

ಎರಡು ಷರತ್ತು: ರಸ್ತೆ ವಿಸ್ತರಣೆಯ ಕಾರ್ಯಾಚರಣೆ ಮುಂದೂಡಲು ಡಿ.ಸಿ, ವರ್ತಕರಿಗೆ ಎರಡು ಷರತ್ತು ವಿಧಿಸಿದ್ದಾರೆ. ಯಾವ ಕಾರಣಕ್ಕೂ ಕೋರ್ಟ್‌ಗೆ ಹೋಗಬಾರದು, 36 ಅಡಿವರೆಗೂ ಸ್ವಯಂ ಪ್ರೇರಿತರಾಗಿ ತೆರವು ಮಾಡಿಕೊಳ್ಳಬೇಕು ಎಂಬ ಷರತ್ತು ಹಾಕಲಾಗಿದೆ.

ತಪ್ಪಿದ್ದಲ್ಲಿ ಜಿಲ್ಲಾಡಳಿತವೇ ಮುಂದೆ ನಿಂತು 40 ಅಡಿಗಳವರೆಗೂ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುತ್ತದೆ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ಹಿಂದಕ್ಕೆ ಸರಿಯಲು ಒಪ್ಪಿಕೊಂಡ ವರ್ತಕರು ಜಿಲ್ಲಾಡಳಿತಕ್ಕೆ ಲಿಖಿತಪೂರ್ವಕ ಮನವಿ ನೀಡಿದರು.

ಸಂಘಟನೆಗಳ ಆಕ್ರೋಶ: 45 ಅಡಿ ಮಾಡಬೇಕಿದ್ದ ರಸ್ತೆತೆರವು ಕೈಬಿಟ್ಟು ವರ್ತಕರ ಒತ್ತಾಯಕ್ಕೆ ಮಣಿದ ಜಿಲ್ಲಾಧಿಕಾರಿ ಆಮೀಷಕ್ಕೊಳಗಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣ ವೇದಿಕೆಯ ಎರಡು ಬಣಗಳು ತೆರವು ಕಾರ್ಯಾಚರಣೆಯ ಸ್ಥಳದಲ್ಲಿ ಪ್ರತಿಭಟನೆ ನಡೆಸಿದವು.

ಸಾರ್ವಜನಿಕ ಹಿತದೃಷ್ಟಿಯನ್ನು ಕಡೆಗಣಿಸಲಾಗುತ್ತಿದೆ. ರಸ್ತೆ ಮಧ್ಯಭಾಗದಿಂದ 45 ಅಡಿ ತೆರವು ಮಾಡಬೇಕೆಂದು ಆಗ್ರಹಿಸಿ ಉಬಯ ಬಣಗಳ ರಾಜೇಶ ಅಂಗಡಿ, ಮುದುಕಪ್ಪ ನಾಯಕ, ಪಂಪಣ್ಣ ನಾಯಕ ಮತ್ತಿತರರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT