ನವದೆಹಲಿ (ಪಿಟಿಐ): ಇಸ್ರೇಲ್ ರಾಯಭಾರಿ ಕಚೇರಿ ಕಾರಿನ ಮೇಲೆ ದಾಳಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಸೈಯದ್ ಮೊಹಮ್ಮದ್ ಅಹ್ಮದ್ ಕಜ್ಮಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರನ್ನೊಳಗೊಂಡ ನ್ಯಾಯಪೀಠ, ಸಂಬಂಧಪಟ್ಟ ಇಲಾಖೆ, ಕಜ್ಮಿ ಪಾಸ್ಪೋರ್ಟ್ ಒತ್ತೆ ಇಟ್ಟುಕೊಂಡು, ಜಾಮೀನು ನೀಡುವಂತೆ ಆದೇಶಿಸಿದೆ. ಆದರೆ ವಿದೇಶ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದೆ. ಜಾಮೀನು ಮನವಿಯನ್ನು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್ನ ಆದೇಶವನ್ನು ಕಜ್ಮಿ, ಸುಪ್ರೀಂ ಕೋರ್ಟ್ನಲ್ಲಿ ಪ್ರಶಿಸಿದ್ದರು.
ಇರಾನ್ ಪತ್ರಿಕೆಯೊಂದರ ಅಂಕಣಕಾರ ಕಜ್ಮಿ, ಇಸ್ರೇಲ್ ರಾಯಭಾರಿ ತಾಲ್ ಯಹೊಶುಹಾಸ್ ಅವರ ಕಾರ್ಗೆ ಅಯಸ್ಕಾಂತ ಬಾಂಬ್ ಇಡುವ ಶಂಕಿತ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದ ಎಂಬ ಆರೋಪದ ಮೇಲೆ ಪೊಲೀಸರು ಅವರನ್ನು ಫೆ. 13ರಂದು ಬಂಧಿಸಿದ್ದರು.