ನವದೆಹಲಿ(ಪಿಟಿಐ): ‘ಅತ್ಯಾಚಾರ ನಡೆದ ಆ ಕರಾಳ ರಾತ್ರಿಯನ್ನು ಮರೆಯಲು ಯತ್ನಿಸುತ್ತಿದ್ದೇನೆ. ಆದರೆ ಮಾಧ್ಯಮಗಳು ಯಾಕೆ ಮತ್ತೆ ಮತ್ತೆ ನನ್ನನ್ನು ಪ್ರಕರಣದಲ್ಲಿ ನೆನಪಿಸುತ್ತಿವೆ’ ಹೀಗೆಂದು ಪಶ್ಚಾತ್ತಾಪ ಪಟ್ಟುಕೊಳ್ಳುತ್ತಿದ್ದಾನೆ ದೆಹಲಿ ಅತ್ಯಾಚಾರ ಪ್ರಕರಣದಲ್ಲಿ ಭಾರಿ ಶಿಕ್ಷೆಯಿಂದ ಪಾರಾದ ಬಾಲಾಪರಾಧಿ.
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಅತ್ಯಾಚಾರ ಪ್ರಕರಣದಲ್ಲಿ ಇತರರೊಂದಿಗೆ ಈತ ಭಾಗಿಯಾಗಿದ್ದರೂ ಬಾಲಾಪರಾಧಿಯಾಗಿದ್ದರಿಂದ ಕಠಿಣ ಶಿಕ್ಷೆಯಿಂದ ಈತ ವಿನಾಯಿತಿ ಪಡೆದಿದ್ದಾನೆ. ಸದ್ಯ ಬಾಲಾಪರಾಧಿಗಳ ಸುಧಾರಣಾ ಕೇಂದ್ರದಲ್ಲಿದ್ದಾನೆ. ಇಲ್ಲಿಂದ ಮನೆಗೆ ಮರಳಿದರೆ ತನ್ನ ಕೊಲೆಯಾಗಬಹುದು ಎಂಬ ಭಯವನ್ನೂ ಈತ ಕೆಲವು ಅಧಿಕಾರಿಗಳ ಬಳಿ ವ್ಯಕ್ತಪಡಿಸಿದ್ದಾನೆ.
3 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಈತನನ್ನು ಇರಿಸಿರುವ ಸಣ್ಣ ಕೋಣೆಯಲ್ಲಿ ಟಿ.ವಿ.ಇದೆ. ಅಲ್ಲದೆ ಒಳಾಂಗಣ ಆಟಕ್ಕೆ ಕೆಲವು ಸೌಲಭ್ಯಗಳು ಒದಗಿಸಲಾಗಿದೆ. ಆದರೆ ಈತನನ್ನು ಇತರ ಬಾಲಾರೋಪಿಗಳ ಜತೆ ಬೆರೆಯಲು ಬಿಡುತ್ತಿಲ್ಲ.
ಅತ್ಯಾಚಾರ ಪ್ರಕರಣದಲ್ಲಿ ಈತ ಭಾಗಿಯಾಗಿರುವ ವರದಿಗಳು ಪತ್ರಿಕೆಯಲ್ಲಿ ಪ್ರಕಟವಾಗಿರುವ ಬಗ್ಗೆ ಹೇಳಿದರೆ ಭಾವುಕನಾಗುತ್ತಿದ್ದಾನೆ. ಮೊದಲಿಗೆ ಕೃತ್ಯದಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದರೂ ಈಗ ನಿರಾಕರಿಸುತ್ತಿದ್ದಾನೆ. ಕಡುಬಡವರಾಗಿರುವ ತಂದೆ ತಾಯಿ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಾನೆ.
ಸುಧಾರಣಾ ಕೇಂದ್ರದಲ್ಲಿಯೇ ಬಟ್ಟೆ ಹೊಲಿಯಲು ಕಲಿತಿರುವ ಬಾಲಾಪರಾಧಿ ಗಿಟಾರ್ ಅಭ್ಯಾಸ ಮಾಡುತ್ತಿದ್ದಾನೆ. ಅಲ್ಲದೆ ಉತ್ತಮ ಬಾಲಕ ಎಂದು ಹೆಸರು ಪಡೆದಿದ್ದಾನೆ.