ಬೆಂಗಳೂರು: `ಆಂಗ್ಲ ಭಾಷೆಯ ಹಾವಳಿಯಿಂದ ಕನ್ನಡಕ್ಕೆ ಕುತ್ತು ಬಂದಿದ್ದು, ಇದನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ~ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಹೇಳಿದ್ದಾರೆ.
ಶನಿವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ ಏರ್ಪಡಿಸಿದ್ದ ಕನ್ನಡದಲ್ಲಿ ಗಣಕ ತರಬೇತಿ ಪಡೆದವರಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದ ಅವರು, `ರಾಜ್ಯದಲ್ಲಿ ಕನ್ನಡಕ್ಕಿಂತ ಇತರ ಭಾಷೆ ಮಾತನಾಡುವವರ ಸಂಖ್ಯೆ ಅಧಿಕವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಕನ್ನಡಕ್ಕೆ ಕುತ್ತು ಬಂದಿದೆ~ ಎಂದರು.
`ರಾಜ್ಯದ ನಿರುದ್ಯೊಗಿಗಳಿಗೆ ಉಚಿತ ಕನ್ನಡ ಗಣಕ ತರಬೇತಿ ಕೇಂದ್ರ ಉಚಿತ ಗಣಕ ಯಂತ್ರದ ಬಗ್ಗೆ ತರಬೇತಿ ನೀಡುತ್ತಾ ಬಂದಿರುವ ಕಾರ್ಯ ಶ್ಲಾಘನಿಯ. ಸರ್ಕಾರ ಮಾಡುವ ಕೆಲಸವನ್ನು ಈ ತರಬೇತಿ ಕೇಂದ್ರ ಮಾಡುತ್ತಿದೆ.
ಇದರಿಂದಾಗಿ ರಾಜ್ಯದ 12 ಸಾವಿರ ಜನರಲ್ಲಿ 7 ಸಾವಿರ ತರಬೇತಿ ಪಡೆದು ಉತ್ತಮ ಉದ್ಯೋಗದಲ್ಲಿ ಇರುವುದು ಉತ್ತಮ ಬೆಳವಣಿಗೆ. ಸರ್ಕಾರ ಎಲ್ಲ ಸರ್ಕಾರಿ ಉದ್ಯೋಗಿಗಳಿಗೆ ಕಂಪ್ಯೂಟರ್ ಕಡ್ಡಾಯ ಮಾಡಿರುವುದು ತುಂಬಾ ಪ್ರಯೋಜನವಾಗಿದೆ. ಸರ್ಕಾರ ಆಧುನಿಕ ತಂತ್ರಜ್ಞಾನಗಳನ್ನು ಗ್ರಾಮೀಣ ಜನರಿಗೆ ತಲುಪಿಸುವ ಮೂಲಕ ಅವರ ಸ್ವಾವಲಂಬಿ ಬದುಕಿದೆ ನೆರವಾಗಬೇಕಿದೆ~ ಎಂದು ನುಡಿದರು.
`ಕನ್ನಡ ಗಣಕಯಂತ್ರ ಉಚಿತ ತರಬೇತಿ ಕೇಂದ್ರ~ದ ಅಧ್ಯಕ್ಷ ಎಸ್.ಎಲ್.ಗಂಗಾಧರಪ್ಪ ಮಾತನಾಡಿ, `ಸಮಾಜ ನಮಗೇನು ಮಾಡಿದೆ ಎನ್ನುವುದು ಮುಖ್ಯವಲ್ಲ. ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ.
ಸಂಸ್ಥೆಗೆ ವರ್ಷಕ್ಕೆ 25 ಲಕ್ಷ ಖರ್ಚಾಗುತ್ತಿದ್ದು, ಇದರಲ್ಲಿ ಸರ್ಕಾರ ಕೇವಲ 3 ಲಕ್ಷ ಅನುದಾನವನ್ನು ನೀಡುತ್ತಿದೆ. ಸರ್ಕಾರ ಸಂಸ್ಥೆಗೆ ಹೆಚ್ಚಿನ ಅನುದಾನ ನೀಡಬೇಕು~ ಎಂದು ಅವರು ಮನವಿ ಮಾಡಿದರು.
ಸಮಾರಂಭದಲ್ಲಿ 480 ಜನರಿಗೆ ತರಬೇತಿಯ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ನ ಅಧ್ಯಕ್ಷೆ ಗೀತಾಶ್ರೀ, ಸಂಜಯನಗರ ಲಯನ್ಸ್ ಕ್ಲಬ್ ಅಧ್ಯಕ್ಷೆ ಸರೋಜನಾಯ್ಡು, ಕೇಂದ್ರದ ಮುಖ್ಯಸ್ಥ ಆರ್.ಎ. ಪ್ರಸಾದ ಮತ್ತಿತರರು ಉಪಸ್ಥಿತರಿದ್ದರು.