ಹೂವಿನಹಡಗಲಿ: ತಾಲ್ಲೂಕಿನ ಸುಕ್ಷೇತ್ರ ಮದಲಗಟ್ಟಿ ಆಂಜನೇಯ ಸ್ವಾಮಿಯ ರಥೋತ್ಸವ ಭಾನುವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ತುಂಗಭದ್ರಾ ನದಿ ತೀರದ ಪಾವನ ಕ್ಷೇತ್ರದಲ್ಲಿ ಸೇರಿದ್ದ ಅಪಾರ ಭಕ್ತರ ಜಯಘೋಷ, ಹರ್ಷೋದ್ಗಾರಗಳ ನಡುವೆ ಸ್ವಾಮಿಯ ಬ್ರಹ್ಮ ರಥೋತ್ಸವ ಸಂಭ್ರಮದಿಂದ ನೆರವೇರಿತು.
ಪಲ್ಲಕ್ಕಿಯಲ್ಲಿ ಸಾಗಿಬಂದ ಸ್ವಾಮಿಯ ಉತ್ಸವಮೂರ್ತಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಸ್ವಾಮಿಯ ನಿಶಾನೆ ಹಾಗೂ ಫೋಟೋ ಹರಾಜು ಜರುಗಿತು. ನಂತರ ವೆಂಕಟರಮಣ ಗೋವಿಂದ... ಎಂಬ ಭಕ್ತರ ಜಯಘೋಷದೊಂದಿಗೆ ರಥೋತ್ಸವ ಚಾಲನೆ ಪಡೆದುಕೊಂಡಿತು.
ಬಳ್ಳಾರಿ ಮತ್ತು ಗದಗ ಜಿಲ್ಲೆಯಿಂದ ಸಹಸ್ರಾರು ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು. ಮದಲಗಟ್ಟಿ ಸುತ್ತಮುತ್ತಲ ಹಳ್ಳಿಗಳ ರೈತರು ಕುಟುಂಬ ಪರಿವಾರದೊಡನೆ ಎತ್ತಿನ ಬಂಡಿ, ಟೆಂಪೋ, ಟ್ರ್ಯಾಕ್ಟರ್ ಗಳಲ್ಲಿ ಜಾತ್ರೆಗೆ ಆಗಮಿಸಿದ್ದರು.
ಬೆಳಗ್ಗೆ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಅರ್ಚಕರು ಪೂಜಾ ವಿಧಿವಿಧಾನ ಪೂರೈಸಿದ ಬಳಿಕ ಅಗ್ನಿಕುಂಡ ಜರುಗಿತು.
ಪಿಎಸ್ಐಗಳಾದ ಆಂಜನೇಯ, ಕೆ.ಜಿ. ಗೋವಿಂದರಾಜ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಮಾಡಲಾಗಿತ್ತು.
ಟ್ರಾಫಿಕ್ ಕಿರಿಕಿರಿ
ಬಳ್ಳಾರಿ ಮತ್ತು ಗದಗ ಜಿಲ್ಲೆಯ ಗಡಿಯಂಚಿನಲ್ಲಿ ನಡೆಯುವ ಬೃಹತ ಜಾತ್ರೆಗೆ ಅಪಾರ ಸಂಖ್ಯೆಯ ವಾಹನಗಳು ಬಂದಿದ್ದರಿಂದ ಸೂಕ್ತ ನಿಲುಗಡೆ ವ್ಯವಸ್ಥೆ ಇಲ್ಲದೇ ಪರದಾಡುವ ಸ್ಥಿತಿ ಕಂಡು ಬಂತು.