ನವದೆಹಲಿ (ಪಿಟಿಐ): 1984ರ ಭೋಪಾಲ್ ವಿಷಾನಿಲ ದುರಂತದ ಆರೋಪಿ ಯೂನಿಯನ್ ಕಾರ್ಬೈಡ್ ನಿಗಮದ ಅಧ್ಯಕ್ಷ ವಾರನ್ ಆಂಡರ್ಸನ್ ಹಸ್ತಾಂತರಕ್ಕಾಗಿ ಅಮೆರಿಕವನ್ನು ಕೋರಲು ದೆಹಲಿಯ ನ್ಯಾಯಾಲಯವೊಂದು ಬುಧವಾರ ಸಿಬಿಐಗೆ ಅನುಮತಿ ನೀಡಿತು.
~ದುರಂತಕ್ಕೆ ಒಳಗಾದ ನತದೃಷ್ಟರ ಭಾವನೆಗಳು ಮತ್ತು ಘಟನೆಯ ಸಂಪೂರ್ಣ ವಾಸ್ತವಾಂಶಗಳ ಪರಿಶೀಲನೆ ಬಳಿಕ ಆಂಡರ್ಸನ್ ಹಸ್ತಾಂತರ ಕೋರಿಕೆ ಅತ್ಯಂತ ಸಮಂಜಸ ಹಾಗೂ ನ್ಯಾಯೋಚಿತ ಎಂಬುದಾಗಿ ನಾನು ಪರಿಗಣಿಸಿದ್ದೇನೆ~ ಎಂದು ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವಿನೋದ್ ಯಾದವ್ ಇಲ್ಲಿ ಹೇಳಿದರು.
~ಅಮೆರಿಕದ ಅಧಿಕಾರಿಗಳಿಂದ ಆಂಡರ್ಸನ್ ಹಸ್ತಾಂತರ ಕೋರಿಕೆಗೆ ಯಾವುದೇ ಪ್ರತಿಬಂಧಗಳು ಕಾನೂನಿನಲ್ಲಿ ಇಲ್ಲ. ಆದ್ದರಿಂದ ಸಿಬಿಐ ಮನವಿಯನ್ನು ಪುರಸ್ಕರಿಸಲಾಗಿದೆ~ ಎಂದು ಅವರು ನುಡಿದರು.