ಪಾಂಡವಪುರ: ವರ್ತಮಾನದ ಚಳವಳಿ ಗಳು ಜನಪರವಾಗಿದ್ದ ಶರಣ ಚಳವಳಿಯ ಹಾದಿ ಹಿಡಿಯಬೇಕು ಎಂದು ಮೇಲುಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಲಿಂಗಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ವಿಜಯ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಾಲೇಜಿಗೊಂದು ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ `ಶರಣ ಚಳವಳಿ ಉಗಮ ಹಾಗೂ ವಿಕಾಸ ವಿಚಾರ~ ಕುರಿತು ಉಪನ್ಯಾಸ ನೀಡಿದರು.
ಜಡ್ಡುಗಟ್ಟಿದ್ದ ವ್ಯವಸ್ಥೆಗೆ ಒಂದು ಹೊಸ ವ್ಯಾಖ್ಯೆ ಬರೆದ ಶರಣ ಚಳವಳಿ 12ನೇ ಶತಮಾನದಲ್ಲಿ ಕನ್ನಡ ಸಾಹಿತ್ಯದ ವಿಶಿಷ್ಟ ಮಜಲನ್ನೆ ಹುಟ್ಟುಹಾಕಿತು. ಅವೈಜ್ಞಾನಿಕ ಹಾಗೂ ಅಂಧಕಾರದ ವೈದಿಕ ಸಂಸ್ಕೃತಿಯನ್ನು ಧಿಕ್ಕರಿಸಿ ಜನರಲ್ಲಿ ಸಮಾನತೆ ಬೀಜ ಬಿತ್ತಿದರು.
ಸಮಾಜದ ಎಲ್ಲ ವರ್ಗದ ಜನ ತಮ್ಮ ಅನುಭವಗಳನ್ನು ನೇರ, ವಸ್ತುನಿಷ್ಠ ಹಾಗೂ ಸರಳವಾಗಿ ವಚನಗಳ ಮೂಲಕ ಜನರಿಗೆ ತಲುಪಿಸಿದರು. ಜನಸಾಮಾನ್ಯರಿಗೆ ನಿಲುಕದೆ ಇದ್ದ ಸಂಸ್ಕೃತಮಯವಾಗಿದ್ದ ಸಾಹಿತ್ಯವನ್ನು ಸರಳೀಕರಿಸಿ ನೈತಿಕ ಜೀವನಕ್ಕೆ ಒತ್ತು ಕೊಟ್ಟು ಅಂದಿನ ಸಮಾಜಕ್ಕೆ ಒಂದು ಶಾಕ್ ಟ್ರೀಟ್ಮೆಂಟ್ ಕೊಡುವುದರ ಜತೆಗೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದು ವಿವರಿಸಿದರು.
ಪ್ರಾಂಶುಪಾಲ ಪ್ರೊ. ನಾರಾಯಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್ ಉದ್ಘಾಟಿಸಿದರು. ಪ್ರೊ. ಕೆ.ರಾಮೇ ಗೌಡ, ಪಿಯುಕಾಲೇಜಿನ ಪ್ರಾಂಶುಪಾಲ ಎನ್.ನಿಂಗೇಗೌಡ, ಉಪಪ್ರಾಂಶುಪಾಲ ಎ.ಎನ್.ಶಿವನಂಜಪ್ಪ, ವಿಜಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ವಿ.ಬಸವ ರಾಜು, ಸಾಹಿತಿ ಡಾ.ಚಿಕ್ಕಮರಳಿ ಬೋರೇಗೌಡ, ಕಸಾಪ ಅಧ್ಯಕ್ಷ ಚಲುವೇಗೌಡ ಕಾರ್ಯಾಧ್ಯಕ್ಷ ಎಸ್. ಲಕ್ಷ್ಮೇಗೌಡ, ಕಾರ್ಯದರ್ಶಿ ಪುಟ್ಟ ಸ್ವಾಮಿಗೌಡ, ಪಿ.ಎಲ್.ಪುಟ್ಟರಾಮು ಇತರರು ಇದ್ದರು.