ಹೈದರಾಬಾದ್: ಸೀಮಾಂಧ್ರ ಶಾಸಕರ ತೀವ್ರ ಗದ್ದಲ ಹಾಗೂ ಪ್ರತಿಭಟನೆ ನಡುವೆಯೂ ಆಂಧ್ರಪ್ರದೇಶ ಪುನರ್ರಚನೆ ಮಸೂದೆ 2013 ಆಂಧ್ರ ವಿಧಾನಸಭೆಯಲ್ಲಿ ಸೋಮವಾರ ಮಂಡನೆಯಾಯಿತು.
ಮಸೂದೆ ಮಂಡನೆಯಾಗುತ್ತಿದ್ದಂತೆ ತೀವ್ರ ಗದ್ದಲ ಉಂಟಾಗಿ ಅನೇಕ ನಾಟಕೀಯ ಬೆಳವಣಿಗೆಗಳಿಗೆ ವಿಧಾನಸಭೆ ಸಾಕ್ಷಿಯಾಯಿತು.
ಆಂಧ್ರ ವಿಭಜನೆಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದ ಮುಖ್ಯಮಂತ್ರಿ ಎನ್.ಕಿರಣ್ಕುಮಾರ್ ರೆಡ್ಡಿ ಅವರು ಅನಾರೋಗ್ಯದ ಕಾರಣ ಸದನಕ್ಕೆ ಗೈರು ಹಾಜರಾಗಿದ್ದರು.
ರೆಡ್ಡಿ ಅನುಪಸ್ಥಿತಿಯಲ್ಲಿ ಮಸೂದೆ ಮಂಡನೆಯಾಗುತ್ತಿದ್ದಂತೆಯೇ ಸೀಮಾಂಧ್ರ ಶಾಸಕರು ವಿರೋಧ ಸೂಚಿಸಿದರು. ಅಲ್ಲದೇ ಘೋಷಣೆಗಳನ್ನು ಕೂಗುತ್ತ ಸ್ಪೀಕರ್ ಪೀಠದ ಬಳಿ ಜಮಾಯಿಸಿದರು.
ಶಾಸಕರ ಈ ವರ್ತನೆಯನ್ನು ತೆಲಂಗಾಣ ಭಾಗದ ಜನಪ್ರತಿನಿಧಿಗಳು ತೀವ್ರವಾಗಿ ಖಂಡಿಸಿದರು. ಶಾಸಕರ ವಾಗ್ವಾದ, ಆರೋಪ ಪ್ರತ್ಯಾರೋಪದಿಂದ ವಿಧಾನಸಭೆ ಅಕ್ಷರಶಃ ಗೊಂದಲದ ಗೂಡಾಗಿತ್ತು. ತೆಲಗುದೇಶಂಗೆ ಸೇರಿದ ಸೀಮಾಂಧ್ರ ಶಾಸಕರು ಮಸೂದೆಯ ಪ್ರತಿಗಳನ್ನು ಹರಿದು ಹಾಕಿದರೆ, ಸೀಮಾಂಧ್ರದ ವೈಎಸ್ಆರ್ ಕಾಂಗ್ರೆಸ್ ಶಾಸಕರು, ಸದನದ ಹೊರಗೆ ಮಸೂದೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಸೂಚಿಸಿದರು. ಈ ಕ್ರಮವನ್ನು ತೆಲಂಗಾಣ ಭಾಗದ ಶಾಸಕರು ತೀವ್ರವಾಗಿ ಖಂಡಿಸಿದರು.
ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಇ. ರಾಜೇಂದ್ರ ‘ಇದು ತೆಲಂಗಾಣ ಜನತೆಗೆ ಮಾಡಿದ ಅವಮಾನ. ಅವರು ಕೂಡಲೆ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.
ಮಸೂದೆಯ ಪ್ರಮುಖ ಅಂಶಗಳು
*ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ತೆಲಂಗಾಣ ರಾಜ್ಯ 119 ವಿಧಾನಸಭೆ ಸದಸ್ಯರು, 40 ವಿಧಾನ ಪರಿಷತ್ ಸದಸ್ಯರು, 17 ಲೋಕಸಭೆ ಮತ್ತು 7 ರಾಜ್ಯಸಭೆ ಸದಸ್ಯರನ್ನು ಒಳಗೊಂಡಿರಲಿದೆ.
*ಆಂಧ್ರ ಪ್ರದೇಶದಲ್ಲಿ 175 ಚುನಾಯಿತ ಶಾಸಕರು, 50 ವಿಧಾನ ಪರಿಷತ್ ಸದಸ್ಯರು, 25 ಲೋಕಸಭೆ ಮತ್ತು 11 ರಾಜ್ಯಸಭೆ ಸದಸ್ಯರು ಇರಲಿದ್ದಾರೆ.
* ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಸದ್ಯದ ಮಟ್ಟಿಗೆ ಒಂದೇ ಹೈಕೋರ್ಟ್ ಇರಲಿದೆ. ಆಂಧ್ರ ಪ್ರದೇಶದಲ್ಲಿ ಪ್ರತ್ಯೇಕ ಹೈಕೋರ್ಟ್ ಅಸ್ತಿತ್ವಕ್ಕೆ ಬರುವವರೆಗೆ ಎರಡೂ ರಾಜ್ಯಗಳು ಜನಸಂಖ್ಯೆಗೆ ಅನುಗುಣವಾಗಿ ಖರ್ಚನ್ನು ಭರಿಸಬೇಕು.
* ಆಂಧ್ರ ಪ್ರದೇಶ ಪುನರ್ರಚನೆ ಮಸೂದೆ–2013 ಜಾರಿಗೆ ಬಂದ ಎರಡು ತಿಂಗಳ ಒಳಗಾಗಿ ಕೇಂದ್ರ ಸರ್ಕಾರ ಮತ್ತು ಜಲಸಂಪನ್ಮೂಲ ಸಚಿವಾಲಯ, ಕೃಷ್ಣಾ ನದಿ ನಿರ್ವಹಣಾ ಮಂಡಳಿ ಮತ್ತು ಗೋದಾವರಿ ನದಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕು.
*ಅಖಿಲ ಭಾರತ ಸೇವೆ ಪ್ರಕಾರ ಎರಡೂ ರಾಜ್ಯಗಳಲ್ಲಿ ಪ್ರತ್ಯೇಕ ವೃಂದ ನೇಮಕಾತಿಗೆ ಅವಕಾಶ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.