ಹೈದರಾಬಾದ್ (ಪಿಟಿಐ): ಎರಡು ತಿಂಗಳ ನಂತರ ಶುಕ್ರವಾರ ನಡೆದ ಆಂಧ್ರಪ್ರದೇಶ ಸಚಿವ ಸಂಪುಟ ಸಭೆಗೆ ರಾಯಲಸೀಮಾ ಮತ್ತು ತೆಲಂಗಾಣ ಭಾಗದ ಎಂಟು ಸಚಿವರು ಗೈರು ಹಾಜರಾಗಿದ್ದರು.
ಈ ಮೂಲಕ ಕೇಂದ್ರದ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ನಿರ್ಧಾರಕ್ಕೆ, ಕಾಂಗ್ರೆಸ್್ ನೇತೃತ್ವದ ಸರ್ಕಾರದ ಸಚಿವರು ನೇರವಾಗಿಯೇ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಯಲಸೀಮಾ ಭಾಗದ ಗಂಟಾ ಶ್ರೀನಿವಾಸ ರಾವ್, ಸಿ. ರಾಮಚಂದ್ರಯ್ಯ, ಗಲ್ಲ ಅರುಣ ಕುಮಾರಿ, ಎರಸು ಪ್ರತಾಪ್ ರೆಡ್ಡಿ, ಮೊಹಮ್ಮದ್ ಅಹಮ್ಮದುಲ್ಲಾ, ಟಿ.ಜಿ. ವೆಂಕಟೇಶ್ ಹಾಗೂ ತೆಲಂಗಾಣದ ಜೆ. ಗೀತಾ ರೆಡ್ಡಿ ಮತ್ತು ದನಂ ನಾಗೇಂದರ್ ಸಭೆಗೆ ಹಾಜರಾಗದ ಸಚಿವರು.
ಕಡಪ ಸಂಸದ ವೈ.ಎಸ್.ಆರ್. ಜಗಮೋಹನ್ ರೆಡ್ಡಿ ಅವರ ಅಕ್ರಮ ಆಸ್ತಿ ಪ್ರಕರಣದಲ್ಲಿ ಗೀತಾ ರೆಡ್ಡಿ ಅವರ ಹೆಸರು ಕೇಳಿಬಂದಿದ್ದ ಹಿನ್ನೆಲೆಯಲ್ಲಿ, ಇತ್ತೀಚೆಗೆ ಸಿಬಿಐ ಗೀತಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರಿಂದ ಅವರು ಸಭೆಗೆ ಹಾಜರಾಗಿಲ್ಲ ಎನ್ನಲಾಗಿದೆ. ಮತ್ತೊಬ್ಬ ಸಚಿವ ದನಂ ನಾಗೇಂದರ್ ವಿದೇಶ ಪ್ರವಾಸದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.