ಹೈದರಾಬಾದ್ (ಪಿಟಿಐ): ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿರುವುದನ್ನು ವಿರೋಧಿಸಿ ತೆಲಗು ದೇಶಂ ಪಕ್ಷ (ಟಿಡಿಪಿ), ವೈಎಸ್ಆರ್ ಕಾಂಗ್ರೆಸ್ ಪಕ್ಷ ಮತ್ತು ಇನ್ನಿತರ ಸಂಯುಕ್ತ ಆಂಧ್ರ ಬೆಂಬಲಿಗರು ಬಂದ್ಗೆ ಕರೆ ನೀಡಿದ್ದರಿಂದ ಕರಾವಳಿ ಆಂಧ್ರ ಮತ್ತು ರಾಯಲಸೀಮಾ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.
ಅಂಗಡಿ–ಮುಂಗಟ್ಟು, ವಾಣಿಜ್ಯ ಮಳಿಗೆಗಳು ಮತ್ತು ಶಾಲಾ–ಕಾಲೇಜುಗಳನ್ನು ಮುಚ್ಚಲಾಗಿತ್ತು. ದಕ್ಷಿಣ ಆಂಧ್ರಪ್ರದೇಶದಲ್ಲಿ ಸಾರಿಗೆ ಸೇವೆ ಸ್ಥಗಿತಗೊಂಡಿತ್ತು.
ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀ-ಸರು ಬಿಗಿಬಂದೋಬಸ್ತ್ ಕಲ್ಪಿಸಿದ್ದು, ಕರಾವಳಿ ಆಂಧ್ರ ಮತ್ತು ರಾಯಲಸೀಮಾ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿವೆ.
ಕೇಂದ್ರದ ನಿರ್ಧಾರದ ವಿರುದ್ಧ ನಗರದ ಬೆಂಜ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಟಿಡಿಪಿ ಶಾಸಕ ದೇವಿನೇನಿ ಉಮಾಮಹೇಶ್ವರ ರಾವ್ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ವಾಹನಗಳು ಸಂಚರಿಸಬಾರದು ಎಂದು ಉದ್ರಿಕ್ತ ಪ್ರತಿಭಟನಾಕಾರು ಹೆದ್ದಾರಿಗಳ ಮೇಲೆ ಅಡೆತಡೆಗಳನ್ನು ಸೃಷ್ಟಿಸಿದ್ದರಿಂದ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸ ಲಾಗಿದೆ ಎಂದು ವಿಜಯವಾಡದ ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.