ಘಟಪ್ರಭಾ (ಗೋಕಾಕ): ತಗಡಿನ ಶೆಡ್ಡಿನಲ್ಲಿ ನಿಲುಗಡೆ ಮಾಡಿದ್ದ ವಾಹನಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ವಾಹನಗಳು ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಇಲ್ಲಿಗೆ ಸಮೀಪದ ಮಲ್ಲಾಪುರ ಪಿ.ಜಿ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಾವೀರ ಹುಲ್ಲೊಳ್ಳಿ ಎಂಬುವರಿಗೆ ಸೇರಿದ್ದವು ಎನ್ನಲಾದ ಕ್ರೂಸರ್ ಜೀಪ್ ಹಾಗೂ ಇಂಡಿಗೋ ಕಾರನ್ನು ಮಲ್ಲಾಪುರ ಕಾಯಿಪಲ್ಲೆ ಮಾರುಕಟ್ಟೆಯ ಪಕ್ಕದ ಶೆಡ್ನಲ್ಲಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ.
ರಾತ್ರಿ ವೇಳೆ, ಸುಮಾರು 1 ಗಂಟೆಗೆ ಶೆಡ್ಡಿಗೆ ಬೆಂಕಿ ಹತ್ತಿಕೊಂಡದ್ದನ್ನು ಅರಿವಿಗೆ ಬಂದಾಗ ಪಕ್ಕದ ಜನರು ಮಹಾವೀರ ಹುಲ್ಲೊಳ್ಳಿ ಅವರಿಗೆ ತಿಳಿಸಿದ್ದಾರೆ. ತಕ್ಷಣ ಅವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಬೆಳಗಿನ ಜಾವ 3 ಗಂಟೆಗೆ ಆಗಮಿಸಿದ ಆಗ್ನಿ ಶಾಮಕ ವಾಹನ ಮತ್ತು ಸಿಬ್ಬಂದಿ ಬೆಂಕಿಯನ್ನು ನಂದಿಸಲು ಮುಂದಾಗುವ ವೇಳೆಗಾ ಗಲೇ ಎರಡೂ ವಾಹನಗಳು ಸಂಪೂರ್ಣ ಸುಟ್ಟು ಹೋಗಿದ್ದವು ಎಂದು ಪೊಲೀ ಸರಿಗೆ ಸಲ್ಲಿಸಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ. ಹಾನಿಗೊಳಗಾದ ಶೆಡ್ ಮತ್ತು ವಾಹನಗಳ ಒಟ್ಟು ಮೌಲ್ಯ ಅಂದಾಜು ರೂ. 10 ಲಕ್ಷ ಇದ್ದು ಅಷ್ಟು ಮೊತ್ತದ ಆಸ್ತಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತನಿಖೆ ನಡೆದಿದೆ.
ಕಾರ್ಮಿಕ ಆತ್ಮಹತ್ಯೆಗೆ ಶರಣು
ಘಟಪ್ರಭಾ (ಗೋಕಾಕ): ಇಲ್ಲಿಗೆ ಸಮೀಪದ ಮಲ್ಲಾಪುರ ಪಿ.ಜಿ. ಗ್ರಾಮದ ಕೃಷಿ ಕೂಲಿ ಕಾರ್ಮಿಕನೊಬ್ಬ ಜೀವನ ದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಅದೇ ಗ್ರಾಮದ ಧರೆಪ್ಪ ಹಾಲಪ್ಪ ಗೋಡನ್ನವರ (45) ಎಂದು ಗುರುತಿಸಲಾಗಿದೆ.
ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.
ಮನೆ ಕಳುವು
ಬೆಳಗಾವಿ: ಮನೆ ಯೊಂದರ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು 24 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋದ ಘಟನೆ ಸಮರ್ಥನಗರದಲ್ಲಿ ಗುರುವಾರ ಸಂಜೆ ನಡೆದಿದೆ. ಅಮಿತ ರಜಪೂತ ಎಂಬುವರು ಮನೆಗೆ ಬೀಗ ಹಾಕಿ ಹೊರಗಡೆ ಹೋದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ. 5 ಗ್ರಾಂ ತೂಕದ ಗಟ್ಟಿ ಚಿನ್ನ ಹಾಗೂ 6 ಗ್ರಾಂ ತೂಕದ ಚೈನು ಕಳ್ಳತನವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.