ಹುಣಸಗಿ: ಸಮೀಪದ ಬಲಶೆಟ್ಟಿಹಾಳ ರಾಜನಕೋಳೂರ ಮಧ್ಯದಲ್ಲಿರುವ ಹುಣಸಗಿ ವಿತರಣಾ ಕಾಲುವೆಯ ಸೇವಾ ರಸ್ತೆಯಲ್ಲಿನ ಮುಳ್ಳು ಕಂಟಿಗಳಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದ ಕೆಲಕಾಲ ತೀವ್ರ ಆತಂಕಕ್ಕೆ ಎಡೆ ಮಾಡಿತ್ತು.
ಬೇಸಿಗೆಯಾಗಿದ್ದರಿಂದ ಯಾರೋ ಹಚ್ಚಿದ ಬೆಂಕಿ ಸುಮಾರು ಎರಡು ಕಿಮಿವರೆಗೂ ಹೊತ್ತಿಕೊಂಡು ಮುಂದುವರಿದಿತ್ತು. ಇದರಿಂದಾಗಿ ಬಲಶೆಟ್ಟಿಹಾಳ ಗ್ರಾಮದ ಬಳಿ ಇರುವ ಅಲಮೇಶ್ವರ ಕ್ಯಾಂಪ್ ವರೆಗೂ ಬೆಂಕಿ ತನ್ನ ಕೆನ್ನಾಲಿಗೆ ಚಾಚಿತ್ತು. ಅಷ್ಟರಲ್ಲಿಯೇ ಕೆಲವರು ಸುರಪುರದ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಅಗ್ನಿ ಶಾಮಕ ಸಿಬ್ಬಂದಿ ಬರುವದು ತಡವಾಗಿದಲ್ಲಿ ಆಂದ್ರಮೂಲದ ರೈತರ ಸುಮಾರು ನಲವತ್ತು ಗುಡಿಸಲು, ಭತ್ತದ ಹುಲ್ಲು, ಭತ್ತದ ರಾಶಿಗಳಿಗೆ ಬೆಂಕಿ ತಗುಲುವ ಸಾಧ್ಯತೆ ಇತ್ತು.
ಯಾವುದೇ ನೀರಿನ ಮೂಲ ಇಲ್ಲದ್ದರಿಂದ ತಕ್ಷಣವೇ ಸ್ಪಂದಿಸಿ ಬೆಂಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿ ಕೊಟ್ರಯ್ಯ, ಮುಜಾವರ, ಪ್ರಕಾಶ, ಯಲ್ಲಪ್ಪ, ಸೋಮಶೇಖರ ಇವರನ್ನು ಅಲಮೇಶ್ವರ ಕ್ಯಾಂಪ್ನ ನಿವಾಸಿಗಳು, ರೈತರು ಅಭಿನಂದಿಸಿದರು.