ಮಡಿಕೇರಿ: ಪ್ರಸಾರ ಭಾರತಿ ಕೊಡಗು ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ `ಆಕಾಶವಾಣಿ ಹಬ್ಬ~ಕ್ಕೆ ಇಲ್ಲಿಗೆ ಸಮೀಪದ ಸುಂಟಿಕೊಪ್ಪದ ಬಳಿ ಇರುವ ವಿಶೇಷ ಮಕ್ಕಳ ಪುನರ್ವಸತಿ ಕೇಂದ್ರ `ಸ್ವಸ್ಥ~ದಲ್ಲಿ ಭಾನುವಾರ ಚಾಲನೆ ನೀಡಲಾಯಿತು.
`ಸ್ವಸ್ಥ~ ಮಕ್ಕಳು ಸೇರಿದಂತೆ ಹಲವು ತಂಡಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮವು `ಆಕಾಶವಾಣಿ ಹಬ್ಬ~ಕ್ಕೆ ಮೆರುಗು ನೀಡಿದವು. `ಸ್ವಸ್ಥ~ ಮಕ್ಕಳು ಮಾಡಿದ `ನಾಣಿಭಟ್ಟನ ಸ್ವರ್ಗದ ಕನಸುಗಳು~ ಎಂಬ ನಾಟಕ ನೋಡುಗರನ್ನು ವಿಶೇಷವಾಗಿ ಸೆಳೆಯಿತು.
ಮಡಿಕೇರಿಯ ಪುದಿಯನೆರವನ ರೇವತಿ ರಮೇಶ್ ಹಾಗೂ ತಂಡದವರು ಮಾಡಿದ `ಒನಕೆ ಓಬವ್ವ~ನ ನಾಟಕವು ಕನ್ನಡ ನಾಡಿನ ಇತಿಹಾಸವನ್ನು ಮೆಲುಕು ಹಾಕಿತು.
ಮಹಾಪುರುಷ ಗೌತಮ ಬುದ್ಧನ ಜೀವನ ಚರಿತ್ರೆ ಬಿಂಬಿಸುವ ಕಥೆಯನ್ನಾಧರಿಸಿದ `ಮಹಾರಾತ್ರಿ~ ಗೀತ ನಾಟಕವು ನೋಡುಗರನ್ನು ಆಸನದ ಅಂಚಿಗೆ ತಂದುನಿಲ್ಲಿಸಿತ್ತು.
ಶೋಭಾ ಸುಬ್ಬಯ್ಯ ಹಾಗೂ ಅವರ ತಂಡದ ಪುಟಾಣಿ ಮಕ್ಕಳು ನೆರವೇರಿಸಿದ `ಕಾವೇರಿ~ ನಾಟಕದ ದೃಶ್ಯಗಳು ನೋಡುಗರ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿತು. ಈ ಕಾರ್ಯಕ್ರಮವನ್ನು ಮಡಿಕೇರಿ ಆಕಾಶವಾಣಿ ನೇರ ಪ್ರಸಾರ ಮಾಡಿದ್ದು ವಿಶೇಷವಾಗಿತ್ತು.
ಇದಕ್ಕೂ ಮೊದಲು ನಡೆದ ಸಮಾರಂಭದಲ್ಲಿ ಮಡಿಕೇರಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ವಿಭಾಗದ ಸಹಾಯಕ ನಿರ್ದೇಶಕಿ ಇಂದಿರಾ ಗಜರಾಜ್, ತಾಂತ್ರಿಕ ವಿಭಾಗದ ಸಹಾಯಕ ನಿರ್ದೇಶಕ ಎಚ್.ಎಂ.ಎಚ್. ಜಲಾಲುದ್ದೀನ್, `ಸ್ವಸ್ಥ~ ಸಂಸ್ಥೆಯ ಮುಖ್ಯಸ್ಥೆ ಗಂಗಾ ಚೆಂಗಪ್ಪ ಹಾಗೂ ಮುಖ್ಯ ಅತಿಥಿಯಾಗಿ ಟಾಟಾ ಕಾಫಿ ಲಿಮಿಟೆಡ್ನ ಹಿರಿಯ ಮ್ಯಾನೇಜರ್ ನಾಗೇಶ್ ರಾವ್ ಭಾಗವಹಿಸಿದ್ದರು.
ಮಡಿಕೇರಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಎಂ.ಶಿವಕುಮಾರ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಮಾದೇಟಿರ ಬೆಳ್ಯಪ್ಪ ಕಾರ್ಯಕ್ರಮ ನಿರೂಪಿಸಿದರು.