ಕೊಚ್ಚಿ: ಭಾರತ ವಿರುದ್ಧದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಪಡೆದ ಕಾರಣ ತಂಡದ ಆಟಗಾರರ ಆತ್ಮವಿಶ್ವಾಸ ಹೆಚ್ಚಿದೆ ಎಂದು ಇಂಗ್ಲೆಂಡ್ನ ಸಮಿತ್ ಪಟೇಲ್ ನುಡಿದಿದ್ದಾರೆ.
`ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸಲು ಸಾಧ್ಯವಾಗಿರುವುದು ಸಂತಸದ ಸಂಗತಿ. ನಾವು ಎರಡು ಅಭ್ಯಾಸ ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದೆವು. ಆದ್ದರಿಂದ ರಾಜ್ಕೋಟ್ನಲ್ಲಿ ಲಭಿಸಿದ ಜಯ ಅದ್ಭುತ ಅನುಭವ ನೀಡಿತು' ಎಂದು ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತದ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಐಪಿಎಲ್ನಲ್ಲಿ ಅವಕಾಶ ಲಭಿಸಬಹುದೇ ಎಂಬ ಪ್ರಶ್ನೆಗೆ, `ಹೌದು. ಐಪಿಎಲ್ ವಿಶ್ವದ ಪ್ರಮುಖ ಲೀಗ್ಗಳಲ್ಲಿ ಒಂದಾಗಿದೆ. ವಿಶ್ವದ ಅತ್ಯುತ್ತಮ ಆಟಗಾರರು ಅದರಲ್ಲಿದ್ದಾರೆ. ಅವಕಾಶ ಸಿಕ್ಕಿದರೆ ಎಲ್ಲರೂ ಆಡಲು ಬಯಸುವರು. ಆದರೆ ಈಗ ಏಕದಿನ ಸರಣಿಯ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದ್ದೇನೆ' ಎಂದು ಉತ್ತರಿಸಿದರು.
ರಾಜ್ಕೋಟ್ನಲ್ಲಿ ನಡೆದ ಪಂದ್ಯದಲ್ಲಿ 20 ಎಸೆತಗಳಲ್ಲಿ 44 ರನ್ ಗಳಿಸಿದ್ದ ಸಮಿತ್ ಇಂಗ್ಲೆಂಡ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.