ಪರ್ತ್ (ಪಿಟಿಐ): ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಆಟಗಾರರು `ಮಾತಿನ ಸಮರ~ದಲ್ಲಿ ತೊಡಗಿರುವುದು ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಕಾವು ಇನ್ನಷ್ಟು ಹೆಚ್ಚುವಂತೆ ಮಾಡಿದೆ.
ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಬ್ರಾಡ್ ಹಡಿನ್ ಅವರು ಭಾರತ `ದುರ್ಬಲ~ ತಂಡ ಎನ್ನುವ ಮೂಲಕ ಮಾತಿನ ಸಮರಕ್ಕೆ ಚಾಲನೆ ನೀಡಿದ್ದರು. `ಭಾರತ ತಂಡವನ್ನು ವಿಶ್ವದ ಇತರ ಯಾವುದೇ ತಂಡಗಳಿಗಿಂತ ಸುಲಭವಾಗಿ ಮಣಿಸಬಹುದು~ ಎಂದು ಅವರು ಸೋಮವಾರ ಹೇಳಿದ್ದರು.
ಭಾರತದ ವೇಗಿ ಜಹೀರ್ ಖಾನ್ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದು, ಹಡಿನ್ ತಮ್ಮ `ದುರ್ಬಲ~ ವಿಕೆಟ್ ಕೀಪಿಂಗ್ನ್ನು ಉತ್ತಮಪಡಿಸುವತ್ತ ಗಮನ ಹರಿಸಿದರೆ ಚೆನ್ನ ಎಂದಿದ್ದಾರೆ. `ಹಡಿನ್ ವಿಕೆಟ್ಕೀಪಿಂಗ್ ಬಗ್ಗೆ ಹೆಚ್ಚಿನ ಚಿಂತೆ ಮಾಡುವುದು ಒಳ್ಳೆಯದು. ನನ್ನ ಪ್ರಕಾರ ಅವರ ಕೀಪಿಂಗ್ ಗುಣಮಟ್ಟ ಕಳಪೆಯಾಗಿದೆ~ ಎಂದು ಜಹೀರ್ ಮಂಗಳವಾರ ತಿಳಿಸಿದರು.
ಜಹೀರ್ ಹೇಳಿಕೆಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಆಸೀಸ್ ತಂಡದ ವೇಗದ ಬೌಲರ್ ಪೀಟರ್ ಸಿಡ್ಲ್, `ಹಡಿನ್ ವಿಕೆಟ್ಕೀಪಿಂಗ್ನತ್ತ ಗಮನ ಕೇಂದ್ರೀಕರಿಸಬೇಕೆಂದು ಜಹೀರ್ ಹೇಳಿದ್ದಾರೆ. ವಿಕೆಟ್ ಕೀಪಿಂಗ್ ಬಗ್ಗೆ ಜಹೀರ್ ನೀಡುವ ಸಲಹೆಗಳು ಹೇಗಿರುತ್ತದೆ ಎಂಬುದನ್ನು ಕೇಳಲು ನನಗಿಷ್ಟವಿಲ್ಲ~ ಎಂದು ವ್ಯಂಗ್ಯವಾಗಿ ನುಡಿದಿದ್ದಾರೆ. `ಈ ರೀತಿಯ ಹೇಳಿಕೆ ನೀಡುವ ಅರ್ಹತೆ ಜಹೀರ್ಗೆ ಇಲ್ಲ~ ಎಂದು ಸಿಡ್ಲ್ ತಿಳಿಸಿದ್ದಾರೆ.
ಹಡಿನ್ ನೀಡಿರುವ ಹೇಳಿಕೆ ಭಾರತದ ಆಟಗಾರರ ವಿರುದ್ಧದ `ಮೈಂಡ್ ಗೇಮ್~ನ ಒಂದು ಭಾಗ ಎಂದು ಜಹೀರ್ ತಿಳಿಸಿದ್ದಾರೆ. ಸರಣಿಯಲ್ಲಿ ಈಗಾಗಲೇ ಹಿನ್ನಡೆ ಅನುಭವಿಸಿರುವ ಭಾರತದ ಆಟಗಾರರ ಮೇಲೆ ಇನ್ನಷ್ಟು ಒತ್ತಡ ಹೇರುವುದು ಇದರ ಗುರಿ ಎಂದಿದ್ದಾರೆ.
`ಆಸೀಸ್ ತಂಡ ಈ ಹಿಂದೆಯೂ ಮೈಂಡ್ ಗೇಮ್ ಆಡಿದೆ. ಅದರಲ್ಲಿ ಹಡಿನ್ ತಮ್ಮ ಪಾತ್ರವನ್ನು ನಿಭಾಯಿಸುತ್ತಿದ್ದಾರೆ~ ಎಂಬುದು ಜಹೀರ್ ಹೇಳಿಕೆ. ಎಡಗೈ ವೇಗಿ ಇದೇ ವೇಳೆ ಆಸೀಸ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಮೇಲೂ `ಬೌನ್ಸರ್~ ಎಸೆದಿದ್ದಾರೆ. ಕಳೆದ ಪಂದ್ಯದಲ್ಲಿ ಪಾಂಟಿಂಗ್ ಶತಕ ಗಳಿಸಿದ್ದರೂ, ಎಂದಿನ ಲಯದಲ್ಲಿ ಬ್ಯಾಟ್ ಮಾಡಿಲ್ಲ ಎಂದು ಜಹೀರ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.