ರಾಂಚಿ (ಪಿಟಿಐ): ಸ್ಪೇನ್ನಲ್ಲಿ ನಡೆದ ಗಾಸ್ಟೀಜ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿರುವ ರಾಜ್ಯದ 14 ವರ್ಷದೊಳಗಿನ ಆಟಗಾರ್ತಿಯರನ್ನು ಜಾರ್ಖಂಡ್ ಸರ್ಕಾರ ಶುಕ್ರವಾರ ಸನ್ಮಾನಿಸಿತು.
ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಆಟಗಾರ್ತಿಯರಿಗೆ ತಲಾ 21 ಸಾವಿರ ರೂಪಾಯಿ ಬಹುಮಾನ ಹಾಗೂ ಕ್ರೀಡಾ ಕಿಟ್ ನೀಡಿದರು. ಅಷ್ಟು ಮಾತ್ರವಲ್ಲದೇ, ರಾಂಚಿಯ ಸಮೀಪ ಕ್ರೀಡಾಂಗಣ ನಿರ್ಮಿಸಲು ಜಮೀನು ನೀಡಿದ್ದಾರೆ.
ಟೂರ್ನಿಗೆಗ ತೆರಳುವ ಮುನ್ನ ಪಾಸ್ಪೋರ್ಟ್ಗಾಗಿ ಜನನ ಪ್ರಮಾಣ ಪತ್ರ ತೆಗೆದುಕೊಳ್ಳಲು ಈ ಬಾಲಕಿಯರು ಹೋದಾಗ ಪಂಚಾಯಿತಿ ಕಚೇರಿಯ ಅಧಿಕಾರಿಗಳು ಕಿರುಕುಳ ನೀಡ್ದ್ದಿದ ಘಟನೆ ನಡೆದಿತ್ತು. ಕೆನ್ನೆಗೆ ಬಾರಿಸಿ ಕಸ ಗುಡಿಸಲು ಹೇಳಿ ಅವಮಾನ ಮಾಡಿದ್ದರು ಎಂದು ವರದಿಯಾಗಿತ್ತು.
ಬಾಲಕಿಯರನ್ನು ಅವಮಾನಿಸಿದ ಪಂಚಾಯಿತಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದೂ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಬುಡಕಟ್ಟು ಜನಾಂಗದ ಈ ಬಾಲಕಿಯರನ್ನು ಅಮೆರಿಕ ಮೂಲದ ಫ್ರಾನ್ಜ್ ಗಾಸ್ಟ್ಲರ್ ಸ್ಥಾಪಿಸಿರುವ ಸರ್ಕಾರೇತರ ಸಂಸ್ಥೆ `ಯುವ ಇಂಡಿಯಾ' ಸ್ಪೇನ್ನ ವಿಕ್ಟೋರಿಯ ಗಾಸ್ಟೀಜ್ನಲ್ಲಿ ನಡೆದ ಈ ಟೂರ್ನಿಗೆ ಕರೆದುಕೊಂಡು ಹೋಗಿತ್ತು. ಈ ತಂಡದಲ್ಲಿ ಒಟ್ಟು 18 ಆಟಗಾರ್ತಿಯರು ಇದ್ದರು.