ಕ್ಯಾಮೆರಾ ಕಣ್ಣು ಮಿಟುಕಿಸಿದ ಅನೇಕ ಕಡೆ ನಟ-ನಟಿಯರು ಕೇಕೆ ಹಾಕುತ್ತಿದ್ದರು. ಬೋನಿಕಪೂರ್ ಪಕ್ಕದಲ್ಲಿ ಶ್ರೀದೇವಿ ಚೌಕಾಸಿ ನಗೆ! ಬೌಂಡರಿ ಲೈನಿನಿಂದಾಚೆ ಮಂದಗಮನೆಯಂತೆ ಬಂದ `ಹಂಚೀಕಡ್ಡಿ ಆಕಾರ~ದ ರಿಯಾ ಸೇನ್ ನಗಲು ತಮಗೆ ಬರುವುದೇ ಇಲ್ಲವೇನೋ ಎಂಬ ಭಾವ ತುಳುಕಿಸಿದರು. ಕನ್ನಡದ ನಟ-ನಟಿಯರ ದಂಡು ತಮ್ಮದೇ ಸುಂದರಲೋಕ ಸೃಷ್ಟಿಸಿಕೊಂಡು ಮನಸೋಇಚ್ಛೆ ಖುಷಿಪಟ್ಟರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಇವರೆಲ್ಲರ ಪಾಲಿಗೆ ಸಂಕ್ರಾಂತಿ ಬೇರೆಯದ್ದೇ ರೀತಿ. ಸಂತೋಷ ಪಡಲು ಅವರೆಲ್ಲರಿಗೆ ಕಾರಣಗಳಿವೆ. ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವು `ಸೆಲೆಬ್ರಿಟಿ ಕ್ರಿಕೆಟ್ ಲೀಗ್~ (ಸಿಸಿಎಲ್) ಮೊದಲ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು 85 ರನ್ಗಳ ಭರ್ಜರಿ ಅಂತರರಿಂದ ಸೋಲಿಸಿತು. ಗೆಲುವಿಗೆ ಅರ್ಧ ಶತಕಗಳ ಕಾಣಿಕೆ ಕೊಟ್ಟ ರಾಜೀವ್ ಹಾಗೂ ಭಾಸ್ಕರ್ ಹಾಗೆ ನೋಡಿದರೆ ಸೆಲೆಬ್ರಿಟಿಗಳೇ ಅಲ್ಲ. ಮಾತೂ ಆಡಲಾಗದ, ಕಿವಿಯೂ ಕೇಳದ ಪ್ರತಿಭಾವಂತ ಧ್ರುವ ಕೂಡ 41 ರನ್ಗಳನ್ನು ಜೋಡಿಸಿದರು. ಅವರೆಲ್ಲರ ಶ್ರಮದ ಪರಿಣಾಮವು ಉಳಿದೆಲ್ಲರ ಮುಖಗಳಲ್ಲಿ ಎದ್ದುಕಂಡಿತು.