ಕಳಸ: ಕಳಸ: ಆಟೊ ಪರ್ಮಿಟ್ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ಕಾಂಗ್ರೆಸ್ ಕಳಸ ಬ್ಲಾಕ್ ಘಟಕ ಆಟೊ ಚಾಲಕರ ಎಲ್ಲ ಹೋರಾಟಕ್ಕೆ ಬೆಂಬಲ ಸೂಚಿಸುವುದರೊಂದಿಗೆ ವಿವಾದ ಇನ್ನಷ್ಟು ಜಟಿಲಗೊಂಡಂತಾಗಿದೆ.ಆಯಾ ದಿನದ ಅನ್ನ ದುಡಿಯುವ ಆಟೊ ಚಾಲಕರ ತುತ್ತಿನ ಚೀಲಕ್ಕೆ ಜಿಲ್ಲಾಡಳಿತ ಅಡ್ಡಿ ಮಾಡುವುದು ಸೂಕ್ತವಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ಪ್ರಭಾಕರ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
ಅಂದಿನ ಸಾರಿಗೆ ಸಚಿವ ಸಗೀರ್ ಅಹಮದ್ ಅವಧಿಯಲ್ಲಿ ನೀಡಲಾಗಿದ್ದ ತಾಲ್ಲೂಕು ಪರ್ಮಿಟ್ ಅನ್ನು ರದ್ದು ಗೊಳಿಸುವ ಮುನ್ನ ಜಿಲ್ಲಾಡಳಿತ ಸಾಕಷ್ಟು ಪುನರ್ವಿಮರ್ಶೆ ಮಾಡ ಬೇಕಿತ್ತು ಎಂದು ವಕ್ತಾರ ಎನ್.ಎಂ. ಹರ್ಷ ಹೇಳಿದರು.ಕಾಂಗ್ರೆಸ್ನ ರಾಜ್ಯ ಮಟ್ಟದ ನಾಯ ಕರ ಗಮನ ಸೆಳೆದು ವಿಧಾನ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡುವಂತೆ ಮನವೊಲಿಸಲಾಗುತ್ತದೆ ಎಂದು ಮುಖಂಡ ಕೆ.ಸಿ.ಧರಣೇಂದ್ರ ಹೇಳಿದರು. ಮೈಸೂರಿನಲ್ಲಿ ನಡೆಯುವ ನಾಡ ರಕ್ಷಣಾ ರ್ಯಾಲಿಯಲ್ಲಿ ಕಳಸ- ಬಾಳೂರಿನ 150 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಶ್ರೆನಿವಾಸ ಹೆಬ್ಬಾರ್ ತಿಳಿಸಿದರು.
ತಾಲ್ಲೂಕು ಪರ್ಮಿಟ್ಗೆ ಒತ್ತಾಯಿಸಿ ಮೌನ ಮೆರವಣಿಗೆ ಮಾಡಿದರೂ ಜಿಲ್ಲಾ ಡಳಿತ ಇನ್ನೂ ಸರಿಯಾಗಿ ಸ್ಪಂದಿಸಿಲ್ಲ. ಆದ್ದರಿಂದ ಸಾರ್ವಜನಿಕರ ಸಹಕಾರದೊಂದಿಗೆ ಮುಂದಿನ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗುತ್ತಿದೆ ಎಂದು ಕಳಸ ಆಟೊ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಮತ್ತು ಬಾಳೆಹೊಳೆ ಸಂಘದ ಅಮರ ನಾಥ್ ತಿಳಿಸಿದರು.
ಕಳಸ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಗುಣಮಟ್ಟದ ವಿದ್ಯುತ್ ನೀಡದ ಮೆಸ್ಕಾಂ ಧೋರಣೆ ಖಂಡಿಸಿ ಕಿರಿಯ ಎಂಜಿನಿಯರ್ ಕಚೇರಿ ಮುಂಭಾಗ ಧರಣಿ ನಡೆಸಲಾಗುತ್ತದೆ ಎಂದು ಗ್ರಾ.ಪಂ. ಅಧ್ಯಕ್ಷ ಭರತ್ ರಾಜ್ ಪ್ರಕಟಿಸಿದರು. ಪಕ್ಷದ ಮುಖಂಡರಾದ ರಾಮಚಂದ್ರಯ್ಯ, ಚಂದ್ರರಾಜಯ್ಯ, ಶುಕೂರ್ ಭಾಗವಹಿಸಿದ್ದರು.