ಬೆಂಗಳೂರು: ‘ಅಸಂಘಟಿತ ಕಾರ್ಮಿಕ ರಾದ ಆಟೊ ಚಾಲಕರನ್ನು ಕಾರ್ಮಿಕರ ಭದ್ರತಾ ಮಂಡಳಿಯಲ್ಲಿ ನೋಂದಾಯಿಸಿ ಗುರುತಿನ ಪತ್ರ ನೀಡಬೇಕು’ ಎಂದು ಬೃಹತ್ ಬೆಂಗಳೂರು ಆಟೊ ಚಾಲಕರ ಸೌಹಾರ್ದ ಕ್ರೆಡಿಟ್ ಕೋ– ಆಪರೇಟಿವ್ ಸಂಘದ ಅಧ್ಯಕ್ಷ ಜವರೇಗೌಡ ಆಗ್ರಹಿಸಿದರು.
ಬೃಹತ್ ಬೆಂಗಳೂರು ಆಟೊ ಚಾಲಕರ ಸೌಹಾರ್ದ ಕ್ರೆಡಿಟ್ ಕೋ– ಆಪರೇಟಿವ್ ಸಂಘವು ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆಟೊ ಚಾಲಕರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೊಳಿಸಿದೆ. ಅದರಂತೆ, ಎಲ್ಲಾ ಆಟೊ ಚಾಲಕರಿಗೆ ಬಿಪಿಎಲ್ ಕಾರ್ಡ್ ನೀಡಿ ಸಮರ್ಪಕ ರೇಷನ್ ದೊರೆಯುವಂತೆ ಮಾಡಬೇಕು’ ಎಂದರು.
‘ಬೆಂಗಳೂರಿನಲ್ಲಿಯೇ 1.5 ಲಕ್ಷಕ್ಕೂ ಹೆಚ್ಚು ಆಟೊ ಚಾಲಕರಿದ್ದಾರೆ. ಇವರಿಗೆಲ್ಲ ವಾಸಕ್ಕೆ ಸ್ವಂತ ಸೂರಿಲ್ಲದೆ ದುಬಾರಿಯಾದ ಮನೆ ಬಾಡಿಗೆ ನೀಡಿ ವಾಸಿಸುವುದು ಕಷ್ಟವಾಗಿದೆ. ಆದ್ದರಿಂದ, ರಾಜ್ಯದ ಎಲ್ಲಾ ವಸತಿಹೀನ ಆಟೊ ಚಾಲಕರಿಗೆ ಮನೆಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.
‘ಸಂಚಾರ ಪೊಲೀಸರು ವಾಹನ ಹಿಡಿದು ಆಟೊ ಚಾಲಕರಿಗೆ ದಂಡ ವಿಧಿಸಿ ಬಲವಂತವಾಗಿ ದಂಡ ವಸೂಲಿ ಮಾಡುವುದು ಸರಿಯಲ್ಲ’ ಎಂದು ಖಂಡಿಸಿದರು.