ಚಿಟಗುಪ್ಪಾ: ಬಸ್ ನಿಲ್ದಾಣವೇ ಆಟೊ ನಿಲ್ದಾಣವಾಗಿ ಒಳಗಡೆ ಪ್ರಯಾಣಿಕರು ಕುಳಿತು ಕೊಳ್ಳಲೂ ಆಗದಷ್ಟು ಹದಗೆಟ್ಟ ಬಸ್ ನಿಲ್ದಾಣ ಹುಮನಾಬಾದ್ ತಾಲ್ಲೂಕಿನ ಬೇಮಳಖೇಡಾ ಗ್ರಾಮದಲ್ಲಿ ಕಂಡುಬರುತ್ತಿದೆ.
ಹಲವು ವರ್ಷಗಳ ಹಿಂದೆ ಹಾಳು ಬಿದ್ದ ಬಸ್ ನಿಲ್ದಾಣದ ಬಗ್ಗೆ `ಪ್ರಜಾವಾಣಿ~ ಬರೆದ ಸುದ್ದಿಗೆ ಸ್ಪಂದಿಸಿದ ಇಲಾಖೆ ನೂತನ ಬಸ್ ನಿಲ್ದಾಣ ನಿರ್ಮಿಸಿ ಕೆಲವು ವರ್ಷಗಳೇ ಕಳೆದಿವೆ. ಆದರೆ ನಿಲ್ದಾಣದ ಸದುಪಯೋಗ ಮಾತ್ರ ಪ್ರಯಾಣಿಕರಿಗೆ ಆಗುತ್ತಿಲ್ಲ ಎಂದು ಗ್ರಾಮದ ಯುವ ಮುಖಂಡ ರಾಜಕುಮಾರ ಮಳಗಿ ಹೇಳುತ್ತಾರೆ.
ನಿಲ್ದಾಣದ ಆವರಣದಲ್ಲಿಯೇ ಪ್ರಯಾಣಿಕರ ಆಟೊಗಳು ನಿಲ್ಲುತ್ತಿದ್ದು, ಬಸ್ಗಳು ಒಳಗಡೆ ಬರಲು ಸ್ಥಳವಿಲ್ಲದಂತಾಗಿದೆ. ನಿಲ್ದಾಣದ ಒಂದು ಕಡೆ ತಿಪ್ಪೆಗುಂಡಿ ಇದ್ದು, ದುರ್ವಾಸನೆಯಿಂದ ಇನ್ನೊಂದು ಕಡೆ ಮದ್ಯದ ಅಂಗಡಿ ಇರುವುದರಿಂದ ಕುಡುಕರ ಕಾಟದಿಂದ ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಕುಳಿತುಕೊಳ್ಳುವುದು ತುಂಬ ಕಷ್ಟವಾಗುತ್ತಿದೆ ಎಂದು ಬಾಬುರೆಡ್ಡಿ ಮದರಗಿ ತಿಳಿಸುತ್ತಾರೆ.
ಇದ್ದು ಇಲ್ಲವಾದ ನಿಲ್ದಾಣದ ಬಗ್ಗೆ ಸಾರಿಗೆ ಇಲಾಖೆ, ಸ್ಥಳಿಯ ಗ್ರಾಮ ಪಂಚಾಯಿತಿ ಯವರು ಹೆಚ್ಚಿನ ಗಮನ ಹರಿಸಿ, ಪ್ರಯಾಣಿಕರಿಗೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿ, ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಅಂಬೋಣವಾಗಿದೆ.