ಮಂಡ್ಯ: ನಗರದಲ್ಲಿ ಆಟೋ ಸಂಚಾರ ಮತ್ತು ಪ್ರಯಾಣ ಕ್ರಮವನ್ನು ವ್ಯವಸ್ಥಿತಗೊಳಿಸಲು ಆಟೊಗಳಿಗೆ ನಿರ್ದಿಷ್ಟ ಸಂಖ್ಯೆಯನ್ನು ನೀಡುವ ಮೂಲಕ ವಿವರಗಳನ್ನು ನೋಂದಣಿ ಮಾಡಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ. ಆರಂಭದಲ್ಲಿ ನಗರದಲ್ಲಿ ಇದನ್ನು ಜಾರಿಗೆ ತರಲಿದ್ದು, ಬಳಿಕ ಜಿಲ್ಲಾದ್ಯಂತ ವಿಸ್ತರಿಸಲಾಗು ವುದು. ನಗರದಲ್ಲಿ ತಿಂಗಳಲ್ಲಿ ನಿರ್ದಿಷ್ಟ ಸಂಖ್ಯೆ ನೀಡಿ ನೋಂದಣಿ ಮಾಡುವ ಪ್ರಕ್ರಿಯೆ ಮುಗಿಯಲಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಣ್ಣ ತಿಳಿಸಿದರು.
ನಗರದ ಸಂಚಾರ ವಿಭಾಗದ ಪೊಲೀಸ್ ಠಾಣೆ ಎದುರು ಆಟೋಗಳಿಗೆ ಸಂಖ್ಯೆ ನೀಡುವ ಪ್ರಕ್ರಿಯೆ ಗೆ ಚಾಲನೆ ನೀಡಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆಗೆ ಮಾತನಾಡಿದರು.ಪ್ರಸ್ತುತ ನಗರದಲ್ಲಿ ಸುಮಾರು 3 ಸಾವಿರ ಆಟೋಗಳು ಇದ್ದು, ಆಟೊ ಪ್ರಯಾಣ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ಪ್ರಯಾಣಿಕರು ಕರೆದ ಕಡೆಗೆ ಬರದಿರುವುದು, ಹೇಳಿದ ಸ್ಥಳಕ್ಕೆ ಬಿಡದೇ ಇರುವುದು, ಅಧಿಕ ಪ್ರಯಾಣದರ ವಸೂಲಿ ಮತ್ತಿತರ ಸಮಸ್ಯೆಗಳಿವೆ. ಇವುಗಳನ್ನು ನಿಯಂತ್ರಿಸುವುದು ಉದ್ದೇಶ ಎಂದು ಈ ಸಂದರ್ಭದಲ್ಲಿ ಹಾಜರಿದ್ದ ಡಿವೈಎಸ್ಪಿ ಚನ್ನಬಸವಣ್ಣ ಹೇಳಿದರು.
ಈಗಿನ ವ್ಯವಸ್ಥೆಯಲ್ಲಿ ಆಟೋಗಳಿಗೆ ‘ಮಂಡ್ಯ’ ಹೆಸರಿನಲ್ಲಿ ನಿರ್ದಿಷ್ಟ ಸಂಖ್ಯೆ ನೀಡಿ, ಆಟೋ ಮತ್ತು ಚಾಲಕನ ವಿವರ ದಾಖಲು ಮಾಡುತ್ತೇವೆ. ಆಟೋ ಚಾಲಕರು ಸ್ಪಂದಿಸದೇ ಇರುವ ಪ್ರಕರಣದಲ್ಲಿ ಪ್ರಯಾಣಿಕರು ಈ ಸಂಖ್ಯೆಯನ್ನು ಹೇಳಿದರೂ ಸಂಪೂರ್ಣ ವಿವರ ಲಭ್ಯವಾಗಲಿದೆ. ಇದು, ಕ್ರಮ ಜರುಗಿಸಲು ನೆರವಾಗಲಿದೆ ಎಂದರು. ತಿಂಗಳಲ್ಲಿ ವಿವರ ನೀಡಿ ನೋಂದಣಿ ಮಾಡ ಲಾಗದ ಆಟೋಗಳ ವಿರುದ್ಧ ಇಲಾಖೆಯು ನಿಯಮಾನುಸಾರ ಕ್ರಮ ಜರುಗಿಸಲಿದೆ ಎಂದ ಅಭಿಪ್ರಾಯಪಟ್ಟರು.
ನಿಯಮಗಳ ಅನುಸಾರ ಹೊರ ಪ್ರದೇಶಗಳ ವ್ಯಾಪ್ತಿ ಆಟೊಗಳು ನಗರದಲ್ಲಿ ಸಂಚಾರ ಮಾಡುವಂತಿಲ್ಲ. ಆದರೆ, ನಗರದಲ್ಲಿ ಅನಧಿಕೃತ ವಾಗಿ ಹೊರಗಿನ ಆಟೋಗಳು ಸಂಚರಿಸುತ್ತಿವೆ. ಇದನ್ನು ಈ ಕ್ರಮದಿಂದ ತಡೆಯಬಹುದಾಗಿದೆ ಎಂದು ವಿವರಿಸಿದರು. ಬಹುತೇಕ ಆಟೋ ಚಾಲಕರು ಇಲಾಖೆಯ ಕಾರ್ಯಕ್ಕೆ ಸ್ಪಂದಿಸಿದ್ದಾರೆ. ಇದರಿಂದ ಆಟೋ ಪ್ರಯಾಣ ವ್ಯವಸ್ಥೆ ಸಮರ್ಪಕಗೊಳ್ಳಲಿದ್ದು, ಚಾಲಕರಿಗೂ ನೆರವಾಗಲಿದೆ ಎಂದು ಈ ಸಂದರ್ಭದಲ್ಲಿ ಹಾಜರಿದ್ದ ಆಟೋ ಚಾಲಕರು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.