ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಹಕಾರ ಸಂಘದ ಪ್ರಸ್ತುತ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಸಹಕಾರ ಸಂಘಗಳ ನಿಬಂಧಕರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಉತ್ತರ ವಲಯ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರನ್ನು ಸಂಘದ ಆಡಳಿತಾಧಿಕಾರಿಯನ್ನಾಗಿ ಮೂರು ತಿಂಗಳ ಅವಧಿಗೆ ನೇಮಕ ಮಾಡಲಾಗಿದೆ.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, ನಿಯಮ ಇತ್ಯಾದಿಗಳನ್ನು ಉಲ್ಲಂಘಿಸಿರುವ ಮಂಡಳಿಯು ಸಂಘದ ಆರ್ಥಿಕ ಪರಿಸ್ಥಿತಿಯ ಅಧೋಗತಿಗೆ ಕಾರಣವಾಗಿರುವುದಾಗಿ ಆರೋಪಿಸಿ ಸಿ.ಉಮೇಶ್, ಎಂ.ಗೋವಿಂದಪ್ಪ, ಚಂದ್ರಶೇಖರ ಸೇರಿದಂತೆ ಸಂಘದ ಹಲವು ಸದಸ್ಯರು 2009ರಲ್ಲಿ ದಾಖಲು ಮಾಡಿದ್ದ ದೂರಿಗೆ ಸಂಬಂಧಿಸಿದಂತೆ ಸಹಕಾರ ಸಂಘಗಳ ನಿಬಂಧಕ ಎಸ್.ಜಿ.ಹೆಗಡೆ ಈ ಆದೇಶ ಹೊರಡಿಸಿದ್ದಾರೆ. ಕಾರ್ಯನಿರ್ವಾಹಕ ನಿರ್ದೇಶಕ ಎಂ.ಜಿ.ನಾರಾಯಣಸ್ವಾಮಿ ವಿರುದ್ಧವೂ ದೂರಲಾಗಿತ್ತು.
`ತಾಲ್ಲೂಕು ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಹಾಗೂ ಸರ್ವೆ ಇಲಾಖೆಗಳಲ್ಲಿ ಕೆಲಸ ಕಾರ್ಯಗಳಿಗೆ ಹಣವನ್ನು ನಿಯಮ ಬಹಿರವಾಗಿ ಪಾವತಿಸಿರುವುದು, ಸಂಘದ ಹಣ ದುರುಪಯೋಗ ಪಡಿಸಿಕೊಂಡಿರುವುದು, ಸಾಲ ಮಂಜೂರಾತಿಯಲ್ಲಿ ಅವ್ಯವಹಾರ, ಸಂಘದ ಬೈಲಾ ಉಲ್ಲಂಘಿಸಿ ಕಾರ್ಯ ನಿರ್ವಹಣಾಧಿಕಾರಿಯನ್ನು ನೇಮಕ ಮಾಡಿರುವುದು, ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಯನ್ನು ಕಾಯ್ದೆಗೆ ವಿರುದ್ಧವಾಗಿ ಮುಂದುವರಿಸಿರುವುದು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಕಾರ್ಯನಿರ್ವಾಹಕ ನಿರ್ದೇಶಕರಿಗೆ ವಹಿಸಿ ಕಾಯ್ದೆ ಉಲ್ಲಂಘಿಸಿರುವುದು ಸೇರಿದಂತೆ ಒಟ್ಟು 13 ಆರೋಪಗಳು ಈ ಆಡಳಿತ ಮಂಡಳಿ ಮೇಲಿದೆ. ಇವೆಲ್ಲ ಗುರುತರ ಆರೋಪಗಳಾಗಿವೆ. ಈ ಹಿನ್ನೆಲೆಯಲ್ಲಿ ಮಂಡಳಿಯನ್ನು ರದ್ದು ಮಾಡುವುದೇ ಸೂಕ್ತ~ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.