ಮಂಡ್ಯ: ಜಿಲ್ಲೆಯ ಮಳವಳ್ಳಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಬಿ. ಸೋಮಶೇಖರ್ ಅವರು ಜೆಡಿಯು ಪಕ್ಷದಿಂದ ಅದೃಷ್ಟ ಪರೀಕ್ಷೆಗಾಗಿ ಮತ್ತೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.
ಜನತಾ ಪರಿವಾರದ ರಾಜ್ಯ ನಾಯಕರಲ್ಲಿ ಇವರೂ ಒಬ್ಬರು. ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವವೂ ಇವರಿಗೆ ಇದೆ. ಏಳನೇ ಬಾರಿಗೆ ಚುನಾವಣಾ ಕಣದಲ್ಲಿದ್ದಾರೆ.
ಕ್ಷೇತ್ರದಲ್ಲಿ ಪ್ರಚಾರ ಹೇಗಿದೆ?
`ಸೈಲೆಂಟ್' ಆಗಿ ನಡೆದಿದೆ. ಅಬ್ಬರ ಹಾಗೂ ಬಹಿರಂಗ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ಮನೆ, ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದೇನೆ. ಕಾರ್ಯಕರ್ತರೂ ಹಾಗೆ ಮಾಡುತ್ತಿದ್ದಾರೆ.
ಕಳೆದ ಚುನಾವಣೆಗಿಂತ ಈ ಚುನಾವಣೆ ಹೇಗೆ ಭಿನ್ನವಾಗಿದೆ?
ಬಹಳ ಭಿನ್ನವಾಗಿದೆ. ಮತದಾರರು ಜಾಗೃತರಾಗಿದ್ದಾರೆ. ಯಾರಿಗೆ ಮತ ನೀಡಿದರೆ ತಮಗೆ ಒಳ್ಳೆಯದಾಗುತ್ತದೆ ಎಂಬ ಅರಿವು ಅವರಿಗೆ ಇದೆ. ಅಭ್ಯರ್ಥಿಯ ಹಿನ್ನಲೆ ನೋಡಿ ಮತ ಕೊಡುತ್ತಾರೆ ಎಂಬ ಭರವಸೆ ಇದೆ. ಜಾತಿ ಲೆಕ್ಕಕ್ಕಿಂತ ಅಭಿವೃದ್ಧಿಗೆ ಒತ್ತು ಸಿಗುತ್ತದೆ. ಕಳೆದ ಚುನಾವಣೆಗಿಂತ ಜಾತಿಯ ಬಳಕೆ ಈ ಚುನಾವಣೆಯಲ್ಲಿ ಹೆಚ್ಚಾಗಿದೆ.
ನಿಮಗೆ ಯಾಕೆ ಮತ ನೀಡಬೇಕು?
ಶಾಸಕ, ಸಚಿವನಾಗಿದ್ದಾಗ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಉತ್ತಮ ಆಡಳಿತಕ್ಕಾಗಿ ಮತ ನೀಡಬೇಕು. ಕೊನೆಯ ಚುನಾವಣೆಯನ್ನು ಎದುರಿಸುತ್ತಿದ್ದೇನೆ. ಈ ಬಾರಿ ಅವಕಾಶ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ.
ನಿಮ್ಮ ಭರವಸೆಗಳು ಏನು?
ನಾನು ಶಾಸಕನಾಗಿದ್ದಾಗ ಆರಂಭಿಸಿದ್ದ ಕೆಲ ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತಿದ್ದು, ಅವುಗಳನ್ನು ಪೂರ್ಣಗೊಳಿಸುತ್ತೇನೆ. ಆಡಳಿತದಲ್ಲಿ ದಕ್ಷತೆ ತರುತ್ತೇನೆ. ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತೇನೆ. ಮೂಲಸೌಕರ್ಯ ಒದಗಿಸುತ್ತೇನೆ.