ಮಾಲೂರು: ಪಟ್ಟಣದ ಸುಬ್ರಮಣ್ಯ ಸ್ವಾಮಿ ದೇಗುಲದಲ್ಲಿ ಆಡಿ ಕೃತಿಕೆ ಪ್ರಯುಕ್ತ ಗುರುವಾರ 15ನೇ ವರ್ಷದ ಕಾವಡಿ ಉತ್ಸವನ್ನು ಭಕ್ತರು ಶ್ರದ್ಧೆ- ಭಕ್ತಿಯಿಂದ ಆಚರಿಸಿದರು.
ದೇವಾಲಯದ ಅರ್ಚಕ ಬಾಲಸುಬ್ರಣ್ಯಂ ದೀಕ್ಷಿತ್ ಅವರ ನೇತೃತ್ವದಲ್ಲಿ ಸುಬ್ರಹ್ಮಣ್ಯಂ ಸ್ವಾಮಿಗೆ ಪಂಚಾಮೃತ ಅಭಿಷೇಕ, ರಜತ ವಸ್ತ್ರಾಂಗಿ ಅಲಂಕಾರ ಸೇವೆ, ಉಂಜಲ್ ಸೇವೆ ನಡೆಸಲಾಯಿತು.
ಪಟ್ಟಣದ ಮೊದಲಿಯಾರ್ ಸಂಘ, ಹನುಮಂತನಗರ ಸೇರಿದಂತೆ ತಾಲ್ಲೂಕಿನ ಮೇಡಹಟ್ಟಿ,ಉಪ್ಪಾರಹಳ್ಳಿ, ಕೋಡೂರು, ದ್ಯಾಪಸಂದ್ರ, ದೊಡ್ಡಕುಂತೂರು ಗ್ರಾಮಗಳಿಂದ ಹರಿಕೆ ಹೊತ್ತ ಭಕ್ತರು ಹಾಲ್ಕಾವಡಿ, ನವಿಲು ಕಾವಡಿ ಮತ್ತು ರಥ ಬಂಡಿಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಮೈತುಂಬಾ ನಿಂಬೆಹಣ್ಣನ್ನು ದಾರದಿಂದ ಪೋಣಿಸಿಕೊಂಡು ಹಾಗೂ ಕಬ್ಬಿಣದ ಕೊಕ್ಕಿಗಳಿಂದ ಬೆನ್ನಿಗೆ ಚುಚ್ಚಿ ಹಗ್ಗದಿಂದ ನೇತಾಡುತ್ತಾ ಕ್ರೈನ್ ಉಂಜಲ್ ಸೇವೆ ನಡೆಸಿ ಹರಿಕೆ ತೀರಿಸಿ ಕೊಳ್ಳುವ ಭಕ್ತರನ್ನು ನೂರಾರು ಮಂದಿ ಭಕ್ತರು ವಿಸ್ಮಯದಿಂದ ವೀಕ್ಷಿಸಿದರು.
ಸಂಜೆ ಸುಬ್ರಹ್ಮಣ್ಯಂ ಸ್ವಾಮಿ ದೇಗುಲದ ಮುಂಭಾಗದಲ್ಲಿ ಕಬ್ಬಿಣದ ಕೊಕ್ಕಿಗಳಿಂದ ಬೆನ್ನಿಗೆ ಚುಚ್ಚಿಕೊಂಡು ಹಗ್ಗದ ಸಹಾಯದಿಂದ ನೇತಾಡುತ್ತಾ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗುವುದನ್ನು ನೋಡಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಅಪಾರ ಗ್ರಾಮಸ್ಥರು ನೆರದಿದ್ದರು.
ಶಾಸಕ ಕೆ.ಎಸ್.ಮಂಜುನಾಥ, ಮುಖಂಡ ಕೆ.ವೈ.ನಂಜೇಗೌಡ, ದೇಗುಲ ಸಮಿತಿ ಅಧ್ಯಕ್ಷ ಎಂ.ಆರ್.ದೇವರಾಜ್, ಎಂ.ಪಿ,ನಾಗರಾಜ್, ಪುರಸಭಾ ಸದಸ್ಯರಾದ ಎಂ.ವಿ.ವೇಮನ, ಮುರಳೀಧರ್, ಮುಖಂಡರಾದ ಪ್ರದೀಪ್ರೆಡ್ಡಿ, ರಾಮಚಂದ್ರ, ಸಮಿತಿ ಸದಸ್ಯರಾದ ಕೃಷ್ಣಸ್ವಾಮಿ, ನಾರಾಯಣಸ್ವಾಮಿ, ಚನ್ನಪ್ಪ, ರಾಮಣ್ಣ, ಚಂದ್ರಪ್ಪ ಮೊದಲಾದವರು ಹಾಜರಿದ್ದರು.