ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಣೆ ಪ್ರಮಾಣ ಬೇಡ ಆತ್ಮ ವಿಮರ್ಶೆ ಬೇಕು

Last Updated 21 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು/ ಕನಕಪುರ/ ಮಂಗಳೂರು: ಹಾಲಿ ಮತ್ತು ಮಾಜಿ ಮುಖ್ಯಮಂತ್ರಿ ನಡುವಿನ ಆಣೆ ಪ್ರಮಾಣ ಸಂಘರ್ಷವು ರಾಜಕೀಯ ಕ್ಷೇತ್ರದ ಜೊತೆಗೆ ಧಾರ್ಮಿಕ ರಂಗದಲ್ಲೂ ಸಂಚಲನ ಸೃಷ್ಟಿಸಿದೆ. ಈ ಪ್ರಯತ್ನ ಕೈಬಿಡುವಂತೆ ಹಲವು ಮಠಾಧೀಶರು ಈ ಇಬ್ಬರ ಮೇಲೂ ಒತ್ತಡ ಹೇರಿದ್ದಾರೆ.

`ಆಣೆ ಪ್ರಮಾಣದಿಂದ ಹಿಂದೆ ಸರಿಯಿರಿ, ವಾತಾವರಣವನ್ನು ತಿಳಿಗೊಳಿಸಿ~ ಎಂದು ಪೇಜಾವರ ಮಠಾಧೀಶ ವಿಶ್ವೇಶ ತೀರ್ಥರು ಸಲಹೆ ಮಾಡ್ದ್ದಿದಾರೆ. `ಸಂಘರ್ಷವನ್ನು ಯಾವ ಮಠ, ಮಂದಿರಕ್ಕೂ ತೆಗೆದುಕೊಂಡು ಹೋಗಬೇಡಿ. ಬದಲಿಗೆ ಈ ಕುರಿತು ಜನತಾ ನ್ಯಾಯಾಲಯದ ಮುಂದೆ ಹೋಗಿ~ ಎಂದು ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸೂಚಿಸಿದ್ದಾರೆ.

`ಈ ವಿಚಾರವನ್ನು ರಾಜ್ಯದ ಇಬ್ಬರೂ ನಾಯಕರು ಕೈಬಿಟ್ಟು, ಆತ್ಮವಿಮರ್ಶೆ ಮಾಡಿಕೊಳ್ಳಬೇಕು~ ಎಂದು ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದ್ದಾರೆ. ಇನ್ನೂ ಹಲವು ಸ್ವಾಮೀಜಿಗಳೂ ಇದೇ ರೀತಿಯ ಸಲಹೆ-ಸೂಚನೆ ನೀಡಿದ್ದಾರೆ.

`ಒತ್ತಡ ಬರುತ್ತಿರುವುದು ನಿಜ~ ಎಂದು ಯಡಿಯೂರಪ್ಪ ಅವರೂ ಒಪ್ಪಿಕೊಂಡಿದ್ದಾರೆ. `ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಆಣೆ, ಪ್ರಮಾಣ ಮಾಡಲು ದೇವರ ಸನ್ನಿಧಿಗೆ ಹೋಗುವ ಅಗತ್ಯವಿಲ್ಲ ಎಂದು ಸ್ವಾಮೀಜಿಗಳು ನೀಡಿದ ತಿಳಿವಳಿಕೆ ಮತ್ತು ಆದೇಶವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ಈ ಕುರಿತು ಗಮನ ಹರಿಸುತ್ತೇನೆ~ ಎಂದು ಹೇಳಿದ್ದಾರೆ.

ಆದರೆ, ಅವರ ಕಚೇರಿ ಮೂಲಗಳ ಪ್ರಕಾರ ಮುಖ್ಯಮಂತ್ರಿ ಅವರ ಧರ್ಮಸ್ಥಳ ಪ್ರವಾಸ ಕಾರ್ಯಕ್ರಮ ಈಗಾಗಲೇ ಸಿದ್ಧವಾಗಿದೆ. 26ರಂದು ರಾತ್ರಿಯೇ ಅವರು ಧರ್ಮಸ್ಥಳಕ್ಕೆ ಹೊರಡಲಿದ್ದಾರೆ. ಮಂಗಳವಾರ ತಡರಾ ತ್ರಿವರೆಗೂ ಅವರ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.

ಕನಕಪುರ ತಾಲ್ಲೂಕು ವೀರಶೈವ ಕ್ಷೇಮಾಭಿವೃದ್ಧಿ ಸಂಘ ಅಲ್ಲಿನ ಪುರಸಭೆ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಗುರುವಂದನಾ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, `ನಮ್ಮ ಕರ್ತವ್ಯ, ಜವಾಬ್ದಾರಿ ಕುರಿತು ಸ್ವಾಮೀಜಿಗಳು ಅರಿವು ಮೂಡಿಸಿದ್ದಾರೆ. ಸಂತೆಯಲ್ಲಿ ಇದ್ದ ಮೇಲೆ ಗದ್ದಲ ಇದ್ದೇ ಇರುತ್ತದೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತೇನೆ~ ಎಂದು ಹೇಳಿದರು.

`ಬುದ್ಧ, ಬಸವ, ಗಾಂಧೀಜಿ ಅವರ ಕಾಲದಿಂದಲೂ ಬೆಳವಣಿಗೆ ಸಹಿಸದವರು ಇದ್ದರು, ಈಗಲೂ ಇದ್ದಾರೆ. ಅಧಿಕಾರದಲ್ಲಿ ಇರುವವರು ಹೇಗೆ ಜನಸೇವೆ ಮಾಡಬೇಕು ಎಂಬುದನ್ನು ಸ್ವಾಮೀಜಿಗಳು ತಿಳಿಸಿದ್ದಾರೆ. ಅದರಂತೆ ನಡೆಯುತ್ತೇನೆ~ ಎಂದರು.

`ನನಗೆ ದೊರೆತಿರುವ ಅಧಿಕಾರವನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ~ ಎಂದು ಅವರು ತಿಳಿಸಿದರು.

ಇದಕ್ಕೂ ಮುನ್ನ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, `ಪ್ರಮಾಣ ಮಾಡಿದ ನಂತರವೇ ಮುಂದಿನ ಚರ್ಚೆ~ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರದ ಕುರಿತು 27ರವರೆಗೆ `ಹೆಚ್ಚಿನ ಚರ್ಚೆ ನಡೆಸಲಾರೆ~ ಎಂದು ಹೇಳಿದ್ದಾರೆ.

ಅಭ್ಯಂತರ ಇಲ್ಲ:`ಯಡಿಯೂರಪ್ಪ ಅವರು ಮಠಾಧೀಶರ ಆಗ್ರಹಕ್ಕೆ ಮಣಿದು ಮಂಜುನಾಥ ಸ್ವಾಮಿಯ ಎದುರು ಪ್ರಮಾಣ ಮಾಡುವ ನಿರ್ಧಾರದಿಂದ ಹಿಂದೆ ಸರಿದಲ್ಲಿ ಎಚ್.ಡಿ. ಕುಮಾರಸ್ವಾಮಿ ಕೂಡ ಹಟ ಹಿಡಿಯುವುದಿಲ್ಲ ಎಂಬ ನಂಬಿಕೆ ಇದೆ~ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಧರ್ಮಸ್ಥಳಕ್ಕೆ ಬಂದು ಆಣೆ ಮಾಡುವಂತೆ ಆಹ್ವಾನ ನೀಡಿದ್ದು ಕುಮಾರಸ್ವಾಮಿ ಅಲ್ಲ. ಯಡಿಯೂರಪ್ಪನವರು. ಬಹಿರಂಗ ಆಹ್ವಾನ ನೀಡಿದಾಗ ಕುಮಾರಸ್ವಾಮಿ ಒಪ್ಪಿಕೊಂಡರು~ ಎಂದರು.

`ಕುಮಾರಸ್ವಾಮಿಗೆ ಬೇರೆ ದಾರಿ ಇರಲಿಲ್ಲ. ತಾವು ಹೇಳಿದ್ದು ಸತ್ಯ ಎಂದು ಸಾಬೀತು ಮಾಡಬೇಕಿತ್ತು. ಹಾಗಾಗಿ ಯಡಿಯೂರಪ್ಪ ಅವರ ಆಹ್ವಾನ ಒಪ್ಪಿಕೊಂಡರು. ಆದರೂ ಈ ವಿಚಾರ ಆಣೆ-ಪ್ರಮಾಣ ಹಂತ ಮುಟ್ಟಿದ್ದು ಸರಿಯಲ್ಲ~ ಎಂದು ಹೇಳಿದರು.
 

ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವೇ
`ನಮ್ಮ ಕರ್ತವ್ಯ, ಜವಾಬ್ದಾರಿ ಕುರಿತು ಸ್ವಾಮೀಜಿಗಳು ಅರಿವು ಮೂಡಿಸಿದ್ದಾರೆ. ಸಂತೆಯಲ್ಲಿ ಇದ್ದ ಮೇಲೆ ಗದ್ದಲ ಇದ್ದೇ ಇರುತ್ತದೆ. ಅದಕ್ಕೆಲ್ಲ ತಲೆ       ಕೆಡಿಸಿಕೊಳ್ಳದೆ  ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತೇನೆ~
 -ಯಡಿಯೂರಪ್ಪ

ಜನರ ಆಶೀರ್ವಾದ ಇದೆ

`ಮಾತು ತಪ್ಪಿದ ಮನುಷ್ಯ ಮನುಷ್ಯನಾಗಿ ಉಳಿಯುವುದಿಲ್ಲ. ಈಗಾಗಲೇ ಅವರು (ಕುಮಾರಸ್ವಾಮಿ) ಮಾತು ತಪ್ಪಿದ್ದರಿಂದ, ಜನತಾ ನ್ಯಾಯಾಲಯದಲ್ಲಿ ಜನತಾ ಜನಾರ್ದನನಿಗೆ (ಯಡಿಯೂರಪ್ಪ) ಆಶೀರ್ವಾದ ನೀಡಿದ್ದಾರೆ. ಧರ್ಮ ಮತ್ತು ಅಧರ್ಮದ ಯುದ್ಧದಲ್ಲಿ ಯಾರಿಗೆ ಜಯ ಸಂದಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ, ಸಾಕ್ಷಿ ಬೇಕಿಲ್ಲ~  
  -ಕಾಂಗ್ರೆಸ್ಸಿನ ಡಿ.ಕೆ.ಶಿವಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT